
ಸಿನಿಮಾ: ನಟ ಅಜಯ್ ರಾವ್ ಅವರು ಮುಖ್ಯ ಭೂಮಿಕೆ ನಿಭಾಯಿಸಿ, ನಿರ್ಮಿಸಿರುವ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಪವನ್ ಭಟ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆಯನ್ನು ಓದಿ.

j3tvkannada
ಕೋರ್ಟ್ ವಿಚಾರಣೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಬಂದಿರುವ ಅನೇಕ ಸಿನಿಮಾಗಳಿವೆ. ಇಂಥ ಸಿನಿಮಾಗಳು ಥ್ರಿಲ್ಲಿಂಗ್ ಆಗಿರುತ್ತವೆ. ಹಾಗಾಗಿ ಈ ಪ್ರಕಾರದ ಸಿನಿಮಾಗಳಿಗೆ ಪ್ರತ್ಯೇಕವಾದ ಪ್ರೇಕ್ಷಕ ವರ್ಗವಿದೆ. ಅಂಥವರಿಗಾಗಿ ‘ಯುದ್ಧಕಾಂಡ’ ಸಿನಿಮಾ ಮೂಡಿ ಬಂದಿದೆ. ಹಾಗಂತ ಇದು ಬರೀ ಕೋರ್ಟ್ ಕಲಾಪದ ಕಹಾನಿ ಅಲ್ಲ.
ಮನಕಲಕುವ ತಾಯಿ-ಮಗಳ ಕಥೆ ಕೂಡ ಹೌದು. ಈ ಸಿನಿಮಾದಲ್ಲಿ ಅಜಯ್ ರಾವ್ ಅವರು ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಎದುರಾಳಿಯಾಗಿ ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ಧ ಹೋರಾಡುವ ತಾಯಿಯಾಗಿ ನಟಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ.
7 ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆಗುತ್ತದೆ. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುವ ತಾಯಿಗೆ ನ್ಯಾಯ ಸಿಗುವುದು ತಡವಾಗುತ್ತದೆ. ಹಾಗಾಗಿ ಆಕೆಯೇ ಕಾನೂನನ್ನು ಕೈಗೆ ತೆಗೆದುಕೊಂಡು ಕೋರ್ಟ್ ಆವರಣದಲ್ಲಿ, ಎಲ್ಲರ ಎದುರಲ್ಲೇ ಅತ್ಯಾಚಾರಿಯ ಹತ್ಯೆ ಮಾಡುತ್ತಾಳೆ. ಹಾಗಾಗಿ, ಆಕೆ ಕೊಲೆಗಾರ್ತಿ ಸ್ಥಾನದಲ್ಲಿ ನಿಲ್ಲುತ್ತಾಳೆ. ಈ ಪ್ರಕರಣದಲ್ಲಿ ಆಕೆಯ ತಪ್ಪು ಖಂಡಿತಾ ಇಲ್ಲ ಎಂದು ವಾದ ಮಾಡುತ್ತಾನೆ ಕಥಾನಾಯಕ! ಅಂತಿಮವಾಗಿ ಆಕೆಯನ್ನು ನಿರಪರಾಧಿ ಎಂದು ಅವನು ಹೇಗೆ ಸಮರ್ಥಿಸಿಕೊಳ್ಳುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.