ಧಾರವಾಡ: ಈ ಬಾರಿಯ ರಾಜ್ಯ ಬಜೆಟ್ನಲ್ಲಿ ದೇವದಾಸಿಯರಿಗೆ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ದೇವದಾಸಿ ಮಹಿಳೆಯರು ಹಾಗೂ ದಲಿತ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಮ್ಮ ಅಳಲನ್ನು ತೊಡಿಕೊಳ್ಳುವುದರ ಜೊತೆಗೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ರಾಜ್ಯದಲ್ಲಿ 46,660 ಜನ ಮಾಜಿ ದೇವದಾಸಿಯರಿದ್ದಾರೆ. ದೇವದಾಸಿ ನಿರ್ಮೂಲನಾ ಕಾಯ್ದೆ ಕೂಡ ಜಾರಿಯಾಗಿದೆ. ಹೀಗಾಗಿ ದೇವದಾಸಿಯರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ.
ದೇವದಾಸಿಯರ ಮಕ್ಕಳ ಮದುವೆಗೆ ಸಹಾಯ ಧನ, ಮಾಶಾಸನ ಪುನರ್ವಸತಿಗಾಗಿ ಸರ್ಕಾರದ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಹಾಗೂ ದೇವದಾಸಿಯರ ಮಕ್ಕಳಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆದ್ಯತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.