
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಕೆ. ಪಿ. ಎಸ್ಸಿ ನಿರಂತರ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂಬ ಸಾರ್ವತ್ರಿಕ ದೂರಿನ ಪರಿಶೀಲನೆಯ ಪ್ರಯತ್ನವಾಗಿ ರಾಜ್ಯ ಸರಕಾರ ರೂಪಿಸಿದ್ದ ವಿಧೇಯಕಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂಕಿತ ಹಾಕಲು ಒಪ್ಪದೆ ವಾಪಸ್ ಕಳಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನಿಯಮಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಮರಳಿಸಿದ್ದಾರೆ. ಕೆಲವು ಲೋಪಗಳನ್ನು ಉಲ್ಲೇಖಿಸಿ ಅವರು ಸ್ಪಷ್ಟನೆ ಕೋರಿದ್ದಾರೆ.

ಕಾನೂನು ತಜ್ಞರ ಅಭಿಪ್ರಾಯವನ್ನು ರಾಜ್ಯ ಸರಕಾರದಿಂದ ಅಪೇಕ್ಷಿಸಿದ್ದಾರೆ. ಮುಸ್ಲಿಂ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೂ ತಡೆ ನೀಡಿದ್ದು, ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿದ್ದಾರೆ. ಕೆ.ಪಿ.ಎಸ್ಸಿಯ ನಿಯಮಗಳಲ್ಲಿ ತಿದ್ದುಪಡಿ ತರುವ ವಿಧೇಯಕ -2025ರಲ್ಲಿನ ಕೆಲವು ಲೋಪಗಳನ್ನು ರಾಜ್ಯಪಾಲರು ಪ್ರಸ್ತಾಪಿಸಿ ಸ್ಪಷ್ಟನೆ ಹಾಗೂ ಕಾನೂನು ತಜ್ಞರ ಅಭಿಪ್ರಾಯವನ್ನು ಸರಕಾರದಿಂದ ಅಪೇಕ್ಷಿಸಿದ್ದಾರೆ. ಸಾಂವಿಧಾನಿಕ ಸಂಸ್ಥೆಯಾದ ಲೋಕಸೇವಾ ಆಯೋಗವು ವಿಧಿ 315ರಡಿ ರಚನೆಯಾಗಿದ್ದು, ವಿಧಿ 320ರಡಿ ಆಯೋಗದ ಕಾರ್ಯ ವಿಧಾನಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಕಾರ್ಯ ವಿಧಾನದಲ್ಲಿ ಬದಲಾವಣೆಗಾಗಿ ‘ಆಯೋಗದೊಂದಿಗೆ ಸಮಾಲೋಚನೆ ನಡೆಸಬೇಕು’ ಎಂಬುದನ್ನು ಸ್ಪಷ್ಟಪಡಿಸುವ ಕಾಯಿದೆಯ ಸೆಕ್ಷನ್ 18 ಅನ್ನು ವಿಧೇಯಕದಲ್ಲಿ ಕೈಬಿಡಲಾಗಿದೆ.
ಹಾಗಾಗಿ ಆಯೋಗದ ಸ್ವಾಯತ್ತತೆಯನ್ನು ರಕ್ಷಿಸುವ ಸಂವಿಧಾನದ ವಿಧಿ 320ಕ್ಕೆ ಈ ಕಾನೂನು ತಿದ್ದುಪಡಿ ಬಾಧಿತ ಆಗಬಹುದು. ಈ ಅಂಶವನ್ನು ಪ್ರಸ್ತಾಪಿಸಿದ ರಾಜ್ಯಪಾಲರು ವಿಧೇಯಕವನ್ನು ವಾಪಸ್ ಕಳಿಸುವ ತಮ್ಮ ತೀರ್ಮಾನಕ್ಕೆ ಸಮರ್ಥನೆ ನೀಡಿದ್ದಾರೆ. ಕೆ.ಪಿ.ಎಸ್ಸಿ ಅಕ್ರಮ, ಭ್ರಷ್ಟಾಚಾರದಿಂದಾಗಿ ಉದ್ಯೋಗಾಕಾಂಕ್ಷಿ ಯುವ ಜನರು ಭ್ರಮನಿರಸನಗೊಂಡಿರುವ ಬಗ್ಗೆ ವಿಧಾನಸಭೆಯಲ್ಲೂ ಸುದೀರ್ಘ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಕಾರ್ಯಶೈಲಿಯಲ್ಲಿ ಸಮಗ್ರ ಸುಧಾರಣೆಗಾಗಿ ಕೆ.ಪಿ.ಎಸ್ಸಿ ಅಧಿನಿಯಮ 1951ರ ನಿಯಮಗಳಲ್ಲಿ ಬದಲಾವಣೆ ಜತೆಗೆ 1959ರ ಕಾಯಿದೆಯಲ್ಲಿ ಕೆಲವು ಪ್ರಮುಖ ತಿದ್ದುಪಡಿ ತರುವ ವಿಧೇಯಕವನ್ನು ಸರಕಾರ ರೂಪಿಸಿತ್ತು ಮತ್ತು ವಿಧಾನ ಮಂಡಲ ಉಭಯ ಸದನಗಳಲ್ಲಿ ವಿಧೇಯಕ ಅನುಮೋದನೆ ಪಡೆದಿತ್ತು.
ಕೆ.ಪಿ.ಎಸ್ಸಿಯ ಹಾಲಿ 16 ಸದಸ್ಯ ಬಲವನ್ನು (ಅಧ್ಯಕ್ಷ ಮತ್ತು 15 ಸದಸ್ಯರು)ತಗ್ಗಿಸುವುದು, ಆಯೋಗದ ಸದಸ್ಯರ ನೇರ ನೇಮಕದ ಹಾಲಿ ವ್ಯವಸ್ಥೆ ಬದಲಿಗೆ ಆಯ್ಕೆಗೆ ಶೋಧನಾ ಸಮಿತಿ ರಚಿಸುವುದು, ಆಯೋಗದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಕರಿಗೆ ಹೊಣೆಗಾರಿಕೆ ನಿಗದಿ ಸೇರಿ ಕೆಲವು ಪ್ರಮುಖ ಅಂಶಗಳು ವಿಧೇಯಕದಲ್ಲಿವೆ.
ಸರಕಾರಿ ಕಾಮಗಾರಿಗಳ ಗುತ್ತಿಗೆ ಮತ್ತು ಖರೀದಿ ಪ್ರಕ್ರಿಯೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲು ಕಲ್ಪಿಸಲು ಹಾಕಿದ್ದಾರೆ. ಈ ವಿಧೇಯಕದ ಬಗ್ಗೆ ಗಂಭೀರ ಆಕ್ಷೇಪ ಎತ್ತಿರುವ ಅವರು, ತಕರಾರುಗಳನ್ನು ಪಟ್ಟಿ ಮಾಡಿ ಸರಕಾರಕ್ಕೆ ಆರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಈ ಕಾನೂನು ತಿದ್ದುಪಡಿ ವಿಧೇಯಕವು ಸಾಂವಿಧಾನಿಕ ಮತ್ತು ಕಾನೂನಾತ್ಮಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ರಾಜ್ಯಪಾಲರು, ವಿಧೇಯಕವನ್ನು ರಾಷ್ಟ್ರಪತಿಗಳ ಪರಿಶೀಲನೆಗಾಗಿ ರವಾನಿಸಿದ್ದಾರೆ. ಧರ್ಮದ ಆಧಾರದ ತಾರತಮ್ಯ ಮಾಡಲು ಹಾಗೂ ಮೀಸಲು ಕಲ್ಪಿಸಲು ಸಂವಿಧಾನದಲ್ಲಿಅವಕಾಶವಿಲ್ಲ ಎಂಬುದನ್ನು ಉದಾಹರಿಸಿ, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.