ಬೆಳಗಾವಿ : ರಾಜ್ಯ ಅರಣ್ಯ ಇಲಾಖೆಯಲ್ಲಿ ಏಳು ವರ್ಷಗಳಿಂದ ಡಿ.ಆರ್.ಎಫ್.ಒ ನೇಮಕಾತಿ ಆಗದ ಕಾರಣ, ಈ ಹುದ್ದೆಗೆ ಸೇರಲು ಬಯಸಿದ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹಲವು ವರ್ಷಗಳಿಂದ ಡಿ.ಆರ್.ಎಫ್.ಒ ನೌಕರಿಗಾಗಿ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ವಯಸ್ಸು ಮೀರುವ ಆತಂಕವೂ ಎದುರಾಗಿದೆ. ರಾಜ್ಯ ಸರಕಾರದ ವಿಳಂಬ ನೀತಿಯಿಂದ ಬೇಸತ್ತ ಅಭ್ಯರ್ಥಿಗಳು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಮೊರೆ ಹೋಗಿದ್ದು, ಶೀಘ್ರ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಕೆ.ಸಿ.ಆರ್.ಎಸ್-32 ರ ನಿಯಮದಡಿ ಅರಣ್ಯ ರಕ್ಷಕರಿಂದ ಉಪವಲಯ ಅರಣ್ಯ ಅಧಿಕಾರಿ ಹುದ್ದೆಯವರೆಗೆ ಶೇ.50 ರಷ್ಟು ಬಡ್ತಿ ಹಾಗೂ ಇನ್ನುಳಿದ ಶೇ. 50 ರಷ್ಟು ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ನೇರ ನೇಮಕಾತಿ ನಿರ್ಲಕ್ಷಿಸಿ, ಕೇವಲ ಬಡ್ತಿ ಮೂಲಕವೇ ಈ ಹುದ್ದೆಗೆ ನೇಮಕಾತಿ ಮಾಡುತ್ತಿರುವುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ 2022 ರ ವೃಂದ ಮತ್ತು ನೇಮಕಾತಿ ನಿಯಮಾನುಸಾರ ಬಿಎಸ್ಸಿ ಅರಣ್ಯ ವಿಜ್ಞಾನ ಅಧ್ಯಯನ ಮಾಡಿದವರಿಗೆ ಶೇ.50 ರಷ್ಟು ಮೀಸಲಿದ್ದು, ಇನ್ನುಳಿದಂತೆ ಎಂಜಿನಿಯರಿಂಗ್ ಮತ್ತು ಕೃಷಿ ಸೇರಿದಂತೆ ಇನ್ನಿತರ ವಿಜ್ಞಾನ ಪದವೀಧರರು ಈ ಹುದ್ದೆಗೆ ಅರ್ಹರು. ಅರ್ಹತೆ ಇರುವ ಸಹಸ್ರಾರು ಪದವೀಧರರು ನೇಮಕಾತಿ ಅಧಿಸೂಚನೆಗೆ ಕಾಯುತ್ತಿದ್ದಾರೆ. ಡಿ.ಆರ್.ಎಫ್.ಒ ಹುದ್ದೆಗೆ 2018 ರಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಸದ್ಯ ಡಿ.ಆರ್.ಎಫ್.ಒ ಹುದ್ದೆ ಖಾಲಿ ಇದ್ದರೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

‘‘ಇಲಾಖೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಇತ್ತೀಚೆಗೆ 87 ವಲಯ ಅರಣ್ಯ ಅಧಿಕಾರಿ ಹುದ್ದೆ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು,’’ ಎಂದರು. ‘‘ಡಿ.ಆರ್.ಎಫ್.ಒ ಹುದ್ದೆಗೆ ಎಂಜಿನಿಯರಿಂಗ್ ಮತ್ತು ಇನ್ನಿತರ ವಿಜ್ಞಾನ ಪದವೀಧರರಿಗೂ ಅವಕಾಶ ದೆ. ಕಳೆದ ಬಾರಿಯ ಅಧಿವೇಶನದಲ್ಲಿ ಅರಣ್ಯ ಸಚಿವರು 143 ಉಪ ವಲಯ ಅರಣ್ಯ ಅಧಿಕಾರಿಗಳ ನೇಮಕಾತಿ ಅಧಿಸೂಚನೆ ಹೊರಡಿಸುವ ಭರವಸೆ ನೀಡಿದ್ದರು. ಇಲಾಖೆ ಇನ್ನಾದರೂ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು,’’ ಎಂದು, ಆಕಾಂಕ್ಷಿಗಳಾದ ಸಿದ್ಧಾರ್ಥ ಹಳಕಲ್, ಚೇತನ ಪೂಜಾರಿ ಹಾಗೂ ಶ್ರೀಧರ ಧಾನವಾಡ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ನೇಮಕಾತಿ ನಿಯಮಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವೃಂದಗಳ ಪದನಾಮಗಳ ಪುನರಾವಲೋಕನ ಮತ್ತು ಆಡಳಿತಾತ್ಮಕ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳನ್ನು ನಿಯೋಗಿಸುವುದಕ್ಕಾಗಿ 2015ರಲ್ಲಿಅಂದಿನ ಅರಣ್ಯ ಪಡೆ ಮುಖ್ಯಸ್ಥ ದೀಪಕ ಶರ್ಮಾ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿತ್ತು. ಆ ಕಮಿಟಿಯ ಸಮಗ್ರ ವರದಿಯನ್ನಾಧರಿಸಿ 2019-20ನೇ ಸಾಲಿನಿಂದ ಆರಂಭವಾಗುವಂತೆ ಮುಂದಿನ ಐದು ವರ್ಷಗಳಲ್ಲಿ3085 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಪಡೆದಿತ್ತು
ಇದರಲ್ಲಿ 16 ಸಹಾಯಕ ಅರಣ್ಯ ಅಧಿಕಾರಿ, 67 ವಲಯ ಅರಣ್ಯ ಅಧಿಕಾರಿ, 751 ಉಪ ವಲಯ ಅರಣ್ಯ ಅಧಿಕಾರಿ, 1500 ಅರಣ್ಯ ರಕ್ಷಕರು ಹಾಗೂ 51 ಅರಣ್ಯ ವೀಕ್ಷಕರ ನೇಮಕಾತಿಗೆ ಶಿಫಾರಸು ಮಾಡಲಾಗಿತ್ತು. ಕೇವಲ 16 ಸಹಾಯಕ ಅರಣ್ಯ ಅಧಿಕಾರಿ ಮತ್ತು ಸುಮಾರು 400 ಅರಣ್ಯ ರಕ್ಷಕರನ್ನು ಮಾತ್ರ ನೇಮಕಾತಿ ಮಾಡಲಾಗಿದ್ದು, ಇನ್ನುಳಿದ ಹುದ್ದೆಗಳ ನೇಮಕಾತಿಗೆ ಸರಕಾರ ಮುಂದಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡರು.