ಹಾಸನ : ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ವಾಹನ ಸಂಚಾರ ಬಂದ್ ಆಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಮಾರ್ಚ್ 15ರಿಂದಲೇ ಜಾರಿಗೆ ಬರುವಂತೆ ಜೂನ್ ತನಕ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ ಎಂಬ ವರದಿಗಳು ಕಳೆದ ವಾರ ಪ್ರಕಟವಾಗಿದ್ದವು. ಈ ಕುರಿತು ಹಾಸನ ಜಿಲ್ಲಾಡಳಿತ ಸ್ಪಷ್ಟನೆಯನ್ನು ನೀಡಿದೆ. ಮಳೆಗಾಲ ಆರಂಭಕ್ಕೂ ಮೊದಲು ಬೆಂಗಳೂರು-ಮಂಗಳೂರು ನಡುವಿನ ಚತುಷ್ಪಥ ಹೆದ್ದಾರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಎನ್.ಹೆಚ್.ಎ.ಐ ಶಿರಾಡಿ ಘಾಟ್ ರಸ್ತೆಯನ್ನು ಮಾರ್ಚ್ 15ರಿಂದ ಬಂದ್ ಮಾಡುವ ಕುರಿತು ಪ್ರಸ್ತಾಪನೆ ಇಲ್ಲ ಎಂಬ ಮಾಹಿತಿ ಈಗ ಲಭ್ಯವಾಗಿದೆ.

ಈ ಕುರಿತು ಹಾಸನ ಉಪ ವಿಭಾಗಾಧಿಕಾರಿ ಡಾ. ಎಂ. ಕೆ. ಶೃತಿ ಸ್ಪಷ್ಟನೆಯನ್ನು ನೀಡಿದ್ದಾರೆ. ಸಕಲೇಶಪುರ-ಶಿರಾಡಿ ಮಾರ್ಗದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡುವ ಪ್ರಸ್ತಾವನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಸನ-ಮಂಗಳೂರು ರಸ್ತೆಯಲ್ಲಿ ಸಕಲೇಶಪುರದ ದೋಣಿಗಾಲ್-ಮಾರನಹಳ್ಳಿ ನಡುವಿನ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬಂದ್ ಮಾಡುವುದಿಲ್ಲ. ಆದರೆ ದೋಣಿಗಾಲ್ನಿಂದ ಕಪ್ಪಳ್ಳಿ ತನಕ ಏಕಮುಖ ಸಂಚಾರ ವ್ಯವಸ್ಥೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
ದೋಣಿಗಾಲ್-ಮಂಜರಾಬಾದ್ ಕೋಟೆ ಮುಂಭಾಗ ತುಂಬಾ ಕಡಿದಾದ ಇಳಿಜಾರು ಇರುವುದರಿಂದ ಆ ಸ್ಥಳದಲ್ಲಿ ಮಳೆಗಾಲ ಪ್ರಾರಂಭದ ಮೊದಲು ಕಾಮಗಾರಿಯನ್ನು ತ್ವರಿತವಾಗಿ ಮಾಡುವ ಸಲುವಾಗಿ, ಏಕಮುಖ ಸಂಚಾರಕ್ಕೆ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಹಿಂದಿನ ವರ್ಷದಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದರಿಂದ ಪ್ರಯಾಣಿಕರಿಗೆ ಹಾಗೂ ಸರಕು ಸಾಗಣೆ ವಾಹನಗಳಿಗೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಈಗ ವಾಹನಗಳ ಸಂಚಾರ ಬಂದ್ ಮಾಡುವುದಿಲ್ಲ ಎಂದು ಹಾಸನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.