
ಉತ್ತರ ಕನ್ನಡ: ಯಲ್ಲಾಪುರ ತಾಲ್ಲೂಕಿನಾದ್ಯಂತ ಗುಡುಗು ಸಹಿತ ಗಾಳಿಮಳೆಯಾಗಿದ್ದು, 3 ತೆಂಗಿನ ಮರ ಹಾಗೂ 6 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಪಟ್ಟಣದ ಮಂಜುನಾಥ ನಗರ ಮತ್ತು ಇಡಗುಂದಿಯಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ಕೋಟೆಮನೆಯಲ್ಲಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಉಮ್ಮಚ್ಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಮನೆಯ ಸೋಮಾ ಬಾರ್ಕಲ್ಯಾ ಸಿದ್ದಿ ಎಂಬುವವರ ಮನೆಮೇಲೆ ಮರಬಿದ್ದು ಹಾನಿಯಾಗಿದೆ. ಸುಮಾರು 500ಕ್ಕೂ ಹೆಚ್ಚು ಹೆಂಚು, ರೀಪು, ಪಿಕಾಸಿಗಳು ಹಾನಿಗೀಡಾಗಿವೆ ಎಂದು ಸೋಮಾ ಬಾರ್ಕಲ್ಯಾ ಸಿದ್ದಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಸದಸ್ಯ ಗ.ರಾ.ಭಟ್ಟ, ಕಾರ್ಯದರ್ಶಿ ಮೋಹನ್, ಗ್ರಾಮ ಆಡಳಿತಾಧಿಕಾರಿ ಶರಣು ಸ್ಥಳಕ್ಕೆ ಭೇಟಿ ನೀಡಿದ್ದಾರೆ.