
ಚಿತ್ರದುರ್ಗ : ಅರಣ್ಯದಿಂದ ಮರದ ದಿಮ್ಮಿಯನ್ನು ಕಳವು ಮಾಡಿಕೊಂಡು ಹೋಗಲು ಯತ್ನಿಸಿದ್ದ ನಾಲ್ವರು ಆರೋಪಿಗಳಿಗೆ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯವು ಅರಣ್ಯದಲ್ಲಿ ಸಸಿ ನೆಟ್ಟು ಪೋಷಿಸುವ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತಾಲ್ಲೂಕಿನ ಮುತ್ತಿಗಾರಹಳ್ಳಿ ಕಾವಲು ಅರಣ್ಯ ಪ್ರದೇಶದಿಂದ 4 ಜನರು ಮರದ ದಿಮ್ಮಿಯನ್ನು ಕದ್ದು ಎತ್ತಿನಗಾಡಿಯೊಂದರಲ್ಲಿ ಸಾಗಿಸುತ್ತಿದ್ದರು. ಇದನ್ನು ತಡೆದು ಪ್ರಶ್ನೆ ಮಾಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಎತ್ತಿನಗಾಡಿ ಹತ್ತಿಸುವ ಯತ್ನ ನಡೆಸಿದ್ದ ನಾಲ್ವರು, ಗಾಡಿಯನ್ನು ನಿಲ್ಲಿಸದೆ ದಿಮ್ಮಿಯನ್ನು ಅಲ್ಲಿಯೇ ಎಸೆದು ಹೋಗಿದ್ದರು. ಈ ಬಗ್ಗೆ ಅರಣ್ಯಾಧಿಕಾರಿ ಬಿ.ಎನ್. ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ಕುರಿತು ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು, ಆರೋಪಿಗಳಿಗೆ ತಲಾ ₹ 4,500 ದಂಡ ವಿಧಿಸಲಾಗಿದೆ. ದಂಡ ಕಟ್ಟದೆ ಇದ್ದಲ್ಲಿ 35 ದಿನಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ಜತೆಗೆ ಎಲ್ಲ ಆರೋಪಿಗಳು ತಲಾ 15 ಸಸಿಗಳನ್ನು ಅರಣ್ಯದಲ್ಲಿ ನೆಟ್ಟು ಒಂದು ವರ್ಷ ಕಾಲ ಅವುಗಳ ಪೋಷಣೆ ಮಾಡಬೇಕು. ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು.
ಸಸಿ ಪೋಷಣೆ ಮಾಡುವ ಬಗ್ಗೆ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಮಹಮದ್ ಶಂಶೀರ್ ಆಲಿ ಅವರು ವಾದ ಮಂಡಿಸಿದರು.