
ದಕ್ಷಿಣ ಕನ್ನಡ: ಕಾಸರಗೋಡಿನ ಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಗುರುವಾರ ಬ್ರಹ್ಮಕಲಶ ಸಂಬಂಧಿ ಚಟುವಟಿಕೆಗಳು ಆರಂಭಗೊಂಡವು.

ಮಾರ್ಚ್ 30ರಂದು ಅಷ್ಟಬಂಧ ಪ್ರತಿಷ್ಠೆ ನಡೆಯಲಿದ್ದು, ಏ.2 ರಂದು ಮೂಡಪ್ಪ ಸೇವೆ ನಡೆಯಲಿದೆ. ಏ.7 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ತಂತ್ರಿ ಶಿವಪ್ರಸಾದ್ ದೇರೇಬೈಲು ಅವರಿಗೆ ಸ್ವಾಗತ, ವಾಸ್ತಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ ಅವರಿಗೆ ಗೌರವ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ಮೊದಲಾದ ಕಾರ್ಯಕ್ರಮಗಳು ಗುರುವಾರ ನಡೆದವು. ತಂತ್ರಿ ಅವರ ಬಳಗದಿಂದ ಅಥರ್ವ ಶೀರ್ಷ ಮಹಾಗಣಪತಿ ಯಾಗ ನಡೆಯಿತು.
ಪ್ರಧಾನ ವೇದಿಕೆಯ ಉದ್ಘಾಟನೆ ಅಂಗವಾಗಿ ನಡೆದ ಧಾರ್ಮಿಕ ಸಭೆಗೆ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಚಾಲನೆ ನೀಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.