
ತುಮಕೂರು : 18ನೇ ಶತಮಾನದ ಆದಿ ಭಾಗದಲ್ಲಿ ಕೊರಟಗೆರೆ ಪ್ರಾಂತ್ಯಕ್ಕೆ ದೊರೆಯಾಗಿದ್ದ “ಕುರಂಗರಾಜ” ದಕ್ಷಿಣ ಭಾರತದ ಮೊದಲ ದಲಿತ ಸಮುದಾಯದ ನಾಯಕ ಎಂದು ಕವಿ ಶಿವಣ್ಣ ತಿಮ್ಲಾಪುರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ನಡೆದ ‘ಚಕೋರ’ ಉಪನ್ಯಾಸಮಾಲಿಕೆಯಲ್ಲಿ ಸ್ಥಳೀಯ ದೊರೆ ಕುರಂಗರಾಜನ ಬಗೆಗಿನ ವಿಶೇಷ ಮಾಹಿತಿ ಹಂಚಿಕೊಂಡರು. ಕುರಂಕೋಟೆಯನ್ನು ನಿರ್ಮಿಸಿದ್ದು, ದೇವಾಲಯಗಳನ್ನು ಕಟ್ಟಿದ್ದು, ಚರ್ಮದ ನಾಣ್ಯಗಳನ್ನು ಬಳಕೆಗೆ ತಂದಿದ್ದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಸಾಮಾನ್ಯರ ದೊರೆಯಾಗಿದ್ದ ಎಂದು ಕುರಂಗರಾಜನ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.

ಕುರಂಗರಾಜನನ್ನು ಕುರಿತು ‘ಕುರಂಗರಾಜ ವೈಭವ’ ಕಾದಂಬರಿ ರಚಿಸಿ ಅದನ್ನು ನಾಟಕ ರೂಪಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದ ಸಾಹಿತಿ ಒ. ನಾಗರಾಜ ಅವರು ಮಾತನಾಡಿ, ಕುರಂಗರಾಜ ಇಡೀ ಕೊರಟಗೆರೆಯ ತಳ ಸಮುದಾಯಕ್ಕೆ ಮನೋಬಲವನ್ನು ತುಂಬಿದ್ದ ವ್ಯಕ್ತಿ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಸುಮಾ ಸತೀಶ್, ಸ್ಥಳೀಯ ಇತಿಹಾಸದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಈರಪ್ಪ ನಾಯಕ ಮಾತನಾಡಿ, ಸ್ಥಳೀಯ ಇತಿಹಾಸದ ಪರಿಚಯ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿ ಆಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಚಕೋರ ಸಂಚಾಲಕರಾದ ನಾಗಭೂಷಣ ಬಗ್ಗನಡು, ಮಲ್ಲಿಕಾ ಬಸವರಾಜು, ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಎಸ್.ಚೈತಾಲಿ, ರಂಗನಾಥ ಮೂರ್ತಿ, ಮುನಿರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶಿವರಾಮಯ್ಯ, ಲೋಕೇಶ್ ನಾಯಕ್, ರೇಣುಕಾ, ಸಿದ್ದಗಂಗಯ್ಯ, ರಮೇಶ್ ಇತರರು ಹಾಜರಿದ್ದರು.