
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಬೇಕು ಎನ್ನುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕನಸಿಗೆ ಕೇಂದ್ರ ಸರ್ಕಾರವು ತಣ್ಣೀರು ಎರಚಿದೆ. ಆದರೆ ಇದೀಗ ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತ ಮಾಡಿಯೇ ಮಾಡುತ್ತೇನೆ. ಅದನ್ನು ಯಾವ ರೀತಿ ಮಾಡಬೇಕು ಎನ್ನುವುದು ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ರಾಮನಗರ ಹಾಗೂ ಕನಕಪುರದ ರಿಯಲ್ ಎಸ್ಟೇಟ್ನ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹೌದು ಈ ಭಾಗದ ಜನರಿಗೂ ಏನಾದರೂ ಬೇಕಲ್ಲವೇ ಎಂದು ಕೇಳಿದ್ದಾರೆ.
ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿವಿಧ ಕಾರಣಗಳಿಗೆ ರಿಯಲ್ ಎಸ್ಟೇಟ್ಗೆ ಭರ್ಜರಿ ಧಮಾಕ ಬಂದಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿಯೇ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸಹ ಹೇಳಲಾಗುತ್ತಿದೆ. ಈ ರೀತಿಯ ಚರ್ಚೆಗಳು ನಡೆಯುತ್ತಿರುವಾಗಲೇ ಡಿ.ಕೆ ಶಿವಕುಮಾರ್ ಅವರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಅದೇನು ಎನ್ನುವ ವಿವರ ನೋಡೋಣ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ವಿಚಾರವಾಗಿ ಅವರು ಮಾತನಾಡಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಹೇಗೆ ಮಾಡಬೇಕು ಎನ್ನುವುದು ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಅಂತ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಅವರು ಇದು ರಿಯಲ್ ಎಸ್ಟೇಟ್ಗಾಗಿ ಮಾಡಿರುವುದು ಅಥವಾ ಭೂಮಿ ಬೆಲೆ ಹೆಚ್ಚಳ ಮಾಡುವ ಕಾರಣದಿಂದ ಮಾಡಲಾಗುತ್ತಿದೆ ಎನ್ನುವುದನ್ನು ಪರೋಕ್ಷವಾಗಿಯೂ ಒಪ್ಪಿಕೊಂಡಿದ್ದಾರೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಯಾವ ರೀತಿ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ರಾಮನಗರ ಹೆಸರು ಪ್ರಸ್ತಾವನೆ ಆಗಬಾರದು ಎಂದು ಯಾರನ್ನು ಭೇಟಿ ಮಾಡಲಾಗಿದೆ ಎನ್ನುವ ವಿಷಯವೂ ತಿಳಿದಿದೆ. ಸಂವಿಧಾನದಲ್ಲಿ ಯಾರನ್ನು ಕೇಳಬೇಕು ಎನ್ನುವುದೇನು ಇಲ್ಲ. ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ಗಾಗಿ ಹೆಸರು ಬದಲಾವಣೆ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವುದರ ಹಿಂದೆ ರಿಯಲ್ ಎಸ್ಟೇಟ್ ಲೆಕ್ಕಾಚಾರ ಇದೆ ಎನ್ನುವ ಮಾತು ಈ ವಿಷಯ ಪ್ರಸ್ತಾವನೆಯಾದಾಗಿನಿಂದಲೂ ಇದೆ. ಇದೀಗ ಮಾಜಿ ಸಚಿವ ಅಶ್ವತ್ಥನಾರಾಯಣ ಅವರು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡಲು ಮುಂದಾಗಿರುವುದು ರಿಯಲ್ ಎಸ್ಟೇಟ್ಗಾಗಿಯೇ ಎಂದಿದ್ದಾರೆ. ಈ ಆರೋಪಕ್ಕೆ ಉತ್ತರಿಸಿರುವ ಡಿ.ಕೆ ಶಿವಕುಮಾರ್ ನಿಜ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಡಿ.ಕೆ ಶಿವಕುಮಾರ್ ಅವರು, ಅವರು ಬೆಂಗಳೂರಿಗೆ ಬಂದಿದ್ದು ಯಾವ ಕಾರಣಕ್ಕೆ ಅಂತ ಅಶ್ವತ್ಥನಾರಾಯಣ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಕನಕಪುರದವರಿಗೆ ಹಾಗೂ ರಾಮನಗರದವರಿಗೆ ಏನೂ ಬೇಡವೇ ಎಂದು ಕೇಳಿದ್ದಾರೆ. ಈ ಜಿಲ್ಲೆಯ ಹೆಸರು ಬದಲಾಗಿ ಬೆಂಗಳೂರು ಬ್ರ್ಯಾಂಡ್ ಮೌಲ್ಯ ಈ ಭಾಗಕ್ಕೂ ವಿಸ್ತರಣೆ ಆಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿತ್ತು. ಆದರೆ, ಈ ಲೆಕ್ಕಾಚಾರ ಇದೀಗ ತಲೆಕೆಳಗೆ ಆದಂತೆ ಆಗಿದೆ.