
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಎಂಜಿನಿಯರ್ಗಳ ನೇಮಕದಲ್ಲಿ ನಡೆದಿರುವ 24 ಎಇಇಗಳ ನೇಮಕದಲ್ಲಿಅಕ್ರಮ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವ ಇಂಗಿತವನ್ನು ಕರ್ನಾಟಕ ಹೈಕೋರ್ಟ್ ವ್ಯಕ್ತಪಡಿಸಿದೆ. ಆ ಬಗ್ಗೆ ಸಿಬಿಐ ತನಿಖೆ ಕುರಿತು ಸರ್ಕಾರ ನಿಲುವನ್ನು ಕೇಳಿದೆ. ಅಕ್ರಮದ ಸಂಬಂಧ ರಾಜ್ಯ ಸರಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ವಿರುದ್ಧ ಕಟು ಟೀಕೆ ಮಾಡಿರುವ ಹೈಕೋರ್ಟ್, ಪ್ರಕರಣವನ್ನು ಸೂಕ್ತ ಸಂದರ್ಭದಲ್ಲಿ ಸಿಬಿಐ ತನಿಖೆಗೆ ವಹಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.

ಸಹಾಯಕ ಎಂಜಿನಿಯರ್ಗಳ ನೇಮಕದಲ್ಲಿಅಕ್ರಮ ಸಾಬೀತಾಗಿರುವ ಕಾರಣ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್ಎಟಿ) ಆದೇಶ ಪ್ರಶ್ನಿಸಿ ಎಂಜಿನಿಯರ್ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಕುರಿತು ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಮತ್ತು ಕೆಪಿಎಸ್ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ರೊಬೆನ್ ಜಾಕಬ್ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಹಾಕುವ ಮೂಲಕ ಕೆಪಿಎಸ್ಸಿಯಲ್ಲಿನ ಲೋಪಗಳು ಮತ್ತು ಸರಕಾರದ ಉದ್ದೇಶಪೂರ್ವಕ ವಿಫಲತೆಯನ್ನು ಪೀಠವು ಅನಾವರಣಗೊಳಿಸಿತು. ಒಂದು ಹಂತದಲ್ಲಿ ನ್ಯಾಯಪೀಠ ”ನಾವು ಏನು ಮಾಡಿದರೂ ನಡೆದು ಹೋಗುತ್ತದೆಂಬ ಸೊಕ್ಕಿನ ನಡತೆಯನ್ನು ತಕ್ಷಣ ಸಂಬಂಧಪಟ್ಟವರು ಬಿಡಬೇಕು. ಅಲೆಕ್ಸಾಂಡರ್ನಂಥವನು ಕಾಲಗರ್ಭದಲ್ಲಿ ಮುಗಿದು ಹೋಗಿದ್ದಾನೆ. ಸಂಬಂಧಿತರಿಗೆ ಗಂಭೀರ ಹಾನಿ ಮಾಡಲಾಗುವುದು,” ಎಂದು ಎಚ್ಚರಿಸಿತು.
ನ್ಯಾಯಾಲಯ ಕೇಳಿದ ಪ್ರಶ್ನೆಗೆ ಕಾಲಾವಕಾಶ ಕೋರುತ್ತಿದ್ದ ಎಜಿ ಮತ್ತು ಕೆಪಿಎಸ್ಸಿ ವಕೀಲರನ್ನು ಕುರಿತು ಪೀಠವು ”ಇಂದು ಒಂದು ಲಾರಿ ತೆಗೆದುಕೊಂಡು ಹೋಗಿ ದಾಖಲೆಗಳನ್ನು ತಂದು ಇಟ್ಟುಕೊಂಡು ಬಿಡಿ. ನಾವು ಕೇಳಿದಂಗೆ ಉತ್ತರ ನೀಡಬೇಕು. ಕಾಲಹರಣ ಮಾಡಬಾರದು,” ಎಂದಿತು. ”ಈ ಪ್ರಕರಣದಲ್ಲಿ ಸಿಒಡಿ, ಸಿಐಡಿಯಿಂದ ಏನೂ ಮಾಡಲಾಗುವುದಿಲ್ಲ. ಏಕೆಂದರೆ ಅವೆಲ್ಲವೂ ರಾಜ್ಯ ಸರಕಾರದ ನಿಯಂತ್ರಣದಲ್ಲೇ ಇರುತ್ತವೆ. ಬೇರೆ ಬೇರೆ ರಾಜ್ಯಗಳಲ್ಲಿಇಂಥ ಪ್ರಕರಣಗಳಲ್ಲಿ ಯಾರ ಕಡೆಯಿಂದ ತನಿಖೆ ಮಾಡಿಸಲಾಗಿದೆ ಎಂಬುದರ ಮಾಹಿತಿ ಒದಗಿಸಬೇಕು. ಪ್ರಕರಣದಲ್ಲಿ ಸಿಬಿಐ ಅನ್ನು ಪ್ರತಿವಾದಿಯಾಗಿ ಮಾಡಲು ಯಾರಿಗಾದರೂ ಆಕ್ಷೇಪಣೆ ಇದೆಯೇ?,” ಎಂದಿತು. ಇದಕ್ಕೆ ಎಜಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಪೀಠವು ”ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಯಾಗಿರುವ ಎಲ್ಲರಿಗೂ ತಿಳಿಸುವುದೇನೆಂದರೆ ಸೂಕ್ತ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆಯಡಿ ಸಿಬಿಐಗೆ ನೀಡುವ ಸಾಧ್ಯತೆ ಪರಿಶೀಲಿಸಬಹುದು. ಈ ಸಂಬಂಧ ಪಕ್ಷಕಾರರು ಪರ/ವಿರೋಧ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಈ ಸಂಬಂಧ ಅರ್ಹ ನಿರ್ಧಾರವನ್ನು ಸೂಕ್ತ ಸಂದರ್ಭದಲ್ಲಿ ಕೈಗೊಳ್ಳಲಾಗುವುದು. ಹಾಗಾಗಿ, ವಿಚಾರಣೆ ಸಂದರ್ಭದಲ್ಲಿ ಸಿಬಿಐ/ ಎನ್ಐಎ ಪರ ವಕೀಲ ಪಿ. ಪ್ರಸನ್ನಕುಮಾರ್ ಲಭ್ಯರಿರಬೇಕು,” ಎಂದು ಆದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ವಿಚಾರಣೆಯ ವೇಳೆ ಕೆಪಿಎಸ್ಸಿ ಪರ ವಕೀಲ ರೊಬೆನ್ ಜಾಕಬ್, ಸಹಾಯಕ ಎಂಜಿನಿಯರ್ ನೇಮಕಾತಿಯಲ್ಲಿನ ಹಗರಣದ ತನಿಖೆಗಾಗಿ ಕೆಪಿಎಸ್ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಿಖಿತವಾಗಿ ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿತ್ತು. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಲು ಕೆಪಿಎಸ್ಸಿ ಕಾರ್ಯದರ್ಶಿಗೆ ನಿರ್ಣಯದ ಮೂಲಕ ಕೆಪಿಎಸ್ಸಿ ತಿಳಿಸಿತ್ತು. ಆದರೆ, ಅವರು ಎಫ್ಐಆರ್ ದಾಖಲಿಸಿರಲಿಲ್ಲ. ಈ ಎಲ್ಲಾ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ತಿಳಿಸಲಾಗಿತ್ತು ಎಂದರು. ಇದನ್ನು ಉಲ್ಲೇಖಿಸಿದ ಪೀಠವು, ತನಿಖೆ ವಿಚಾರವನ್ನು ಕೆಪಿಎಸ್ಸಿ ತಿಳಿಸಿದರೂ ಸರಕಾರವು ಹೇಗೆ ನೇಮಕ ಆದೇಶಗಳನ್ನು ನೀಡಿದೆ, ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಪ್ರಶ್ನಿಸಿತು. ಆಗ ಅವರು, ”ಸಹಾಯಕ ಎಂಜಿನಿಯರ್ಗಳ ಅಗತ್ಯ ತುಂಬಾ ಇತ್ತು. ಇದೇ ಸಂದರ್ಭದಲ್ಲಿ ಕಿರಿಯ ಎಂಜಿನಿಯರ್ಗಳ ನೇಮಕಾತಿ ನಡೆಯುತ್ತಿತ್ತು,” ಎಂದು ಸಮರ್ಥನೆ ನೀಡಲು ಮುಂದಾದರು. ಆಗ ಸಿಟ್ಟಾದ ನ್ಯಾಯಪೀಠ ”ಹಾಗಾದರೆ ಮಾರ್ಕೆಟ್ನಲ್ಲಿ ಕುಳಿತಿರುವವರನ್ನು ಕೂಡ್ರಿಸಿ ಬಿಡಿ. ಸಿಐಡಿ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಹೇಳಿರುವಾಗ ನೇಮಕ ಆದೇಶ ನೀಡಿರುವುದು ಹಿಂದೆಂದೂ ಕಂಡಿರದ ನಡೆಯಾಗಿದೆ. ಇದೆಲ್ಲವೂ ಹಾಗೆ ಆಗಿರಲು ಸಾಧ್ಯವಿಲ್ಲ. ವ್ಯವಹಾರ ಏನಾಗಿದೆ ಎಂದು ಎಸ್ಎಸ್ಎಲ್ಸಿ ಓದಿರುವವರಿಗೂ ಗೊತ್ತಿರುತ್ತದೆ. ವ್ಯವಹಾರ ಎಂದರೆ ಬೇರೆ ಏನೋ ಎಂದು ತಿಳಿದುಕೊಳ್ಳಬೇಡಿ. ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗುವುದು ಇದೆ. ಅದರಿಂದ ಹಲವರಿಗೆ ಮುಜುಗರವಾಗಲಿದೆ,” ಎಂದೂ ಮೌಖಿಕವಾಗಿ ಹೇಳಿತು.