
ಮೈಸೂರು: ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಾ.18 ಹಾಗೂ 19ರಂದು ನಗರದ ವಿವಿದೆಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ಮಾರ್ಚ್ 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಕುವೆಂಪುನಗರ ಉಪವಿಭಾಗ ವ್ಯಾಪ್ತಿಯ ಆರ್.ಕೆ.ನಗರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕುವೆಂಪುನಗರ ಕೆಎಚ್ಬಿ 1,2,3,4ನೇ ಹಂತ, ಅರವಿಂದ ನಗರ, ಕೆಎಸ್ಆರ್ಟಿಸಿ ಡಿಪೋ ಸುತ್ತಮುತ್ತಲಿನ ಪ್ರದೇಶ, ಕಾಲಭೈರವೇಶ್ವರ ಛತ್ರ ಸುತ್ತಮುತ್ತಲಿನ ಪ್ರದೇಶ, ಐಶ್ವರ್ಯ ಲೇಔಟ್, ಕುವೆಂಪುನಗರ ಎನ್ ಮತ್ತು ಎಂ ಬ್ಲಾಕ್, ಆರ್.ಎಂ.ಪಿ ಕ್ವಾಟ್ರರ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಾರ್ಚ್ 19 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಹೂಟಗಳ್ಳಿ ಉಪವಿಭಾಗ ವ್ಯಾಪ್ತಿಯ ಇಲವಾಲ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಮೇಗಳಾಪುರ, ಚಿಕ್ಕನಹಳ್ಳಿ, ಮಲ್ಲೇಗೌಡನ ಕೊಪ್ಪಲು, ಆನಂದೂರು ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ. ಮೈಸೂರು ಜಿಲ್ಲೆಯ ಹುಣಸೂರು, ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಸೋಮವಾರ ಬಿರುಗಾಳಿ ಸಹಿತ ಜೋರು ಮಳೆ ಸುರಿದಿದ್ದು, ಕಾದು ಕೆಂಡವಾಗಿದ್ದ ಇಳೆಯನ್ನು ತಂಪಾಗಿಸಿತು. ಸಂಜೆ ವೇಳೆಗೆ ಮಳೆ ಸುರಿದಿದ್ದರಿಂದ ಮನೆ ಸೇರಲು ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡಿದರು. ಇನ್ನು ಭಾರಿ ಗಾಳಿಯಿಂದಾಗಿ ಎಚ್. ಡಿ.ಕೋಟೆ, ಸರಗೂರು ತಾಲೂಕಿನ ಅಲ್ಲಲ್ಲಿ ಸಾವಿರಾರು ಬಾಳೆಗಿಡಗಳು ನೆಲಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ.

ಹುಣಸೂರು ನಗರ ಸೇರಿದಂತೆ ಗಾವಡಗೆರೆ, ಹನಗೋಡು, ಬಿಳಿಕೆರೆ, ಕಸಬಾ ಹೋಬಳಿಗಳ ಗ್ರಾಮಗಳಲ್ಲಿ ಸೋಮವಾರ ಸಂಜೆ ವರ್ಷದ ಮೊದಲ ವರ್ಷಧಾರೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಗರದಲ್ಲಿ ಭಾರಿ ಸುಂಟರಗಾಳಿ, ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಒಮ್ಮೆಲೇ ಸುಮಾರು ನೂರು ಮೀಟರ್ ಎತ್ತರದ ಸುಂಟರ ಗಾಳಿ ಇಡೀ ಮೈದಾನವನ್ನು 15 ನಿಮಿಷ ಕಾಲ ಸುತ್ತುತ್ತಾ ಭಾಧಿರಿ ದೂಳೆಬ್ಬಿಸುತ್ತಾ ಮುಂದೆ ಸಾಗಿತು. ಈ ವೇಳೆ ಮಣ್ಣು, ಕಲ್ಲು, ಸಿಕ್ಕ ವಸ್ತುಗಳನ್ನು ಗಾಳಿಯೊಂದಿಗೆ ಬಾನೆತ್ತರಕ್ಕೆ ಕೊಂಡೊಯ್ದು ಆತಂಕ ಸೃಷ್ಟಿಸಿತ್ತು. ಮೈದಾನದಲ್ಲಿಆಟವಾಡುತ್ತಿದ್ದ ಮಕ್ಕಳು ಸುಂಟರಗಾಳಿಯ ರೌದ್ರಾವತಾರ ಕಂಡು ಮೈದಾನದಿಂದ ಓಡಿ ತಪ್ಪಿಸಿಕೊಂಡರು.ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಲ್ಲಾ ವಲಯಗಳಲ್ಲಿಉತ್ತಮ ಮಳೆಯಾಗಿದೆ. ಸೋಮವಾರ ಮಧ್ಯಾಹ್ನ 3ಕ್ಕೆ ಆರಂಭವಾದ ಬಿರುಗಾಳಿ, ಗುಡುಗು ಸಹಿತ ಮಳೆ ಸಂಜೆವರೆಗೂ ಸುರಿಯಿತು.