
ಕಲಬುರಗಿ: ಜಿಲ್ಲೆಯಲ್ಲಿ ಮಳೆಗಾಲ ಆರಂಭದಲ್ಲಿಯೇ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿ ಶೇ.70 ರಷ್ಟು ಭರ್ತಿಯಾಗಿವೆ. ಇದರಿಂದ ಡ್ಯಾಂಗಳಿಗೆ ಜೀವ ಕಳೆ ಬರುತ್ತಿದೆ. ಈ ವರ್ಷ ಮುಂಗಾರು ಪೂರ್ವದಲ್ಲೇ ಮಳೆ ಉತ್ತಮವಾಗಿ ಸುರಿದಿದೆ. ಕೇವಲ ಈ ಭಾಗದಲ್ಲಿಅಷ್ಟೇ ಅಲ್ಲದೆ ರಾಜ್ಯದ ಹಲವೆಡೆ ವರುಣ ಕರುಣೆ ತೋರಿದ್ದಾನೆ. ಮಳೆ ಉತ್ತಮವಾದ ಕಾರಣ ಜಲಾಶಗಳಿಗೆ ನೀರು ಹರಿದು ಬಂದಿದೆ. ಅಷ್ಟೇ ಅಲ್ಲದೆ ಮೇಲ್ಭಾಗದ ಜಲಾಶಗಳಿಂದ ನೀರು ಬಿಟ್ಟಿರುವುದರಿಂದ ಬಹುತೇಕ ಜಲಾಶಗಳಿಗೆ ಮಳೆಗಾಲದ ಆರಂಭದಲ್ಲೇ ಜೀವ ಕಳೆ ತುಂಬಿವೆ. ಕಲಬುರಗಿ, ಬೀದರ್, ಯಾದಗಿರಿ ಭಾಗದ ಬಹುತೇಕ ಜಲಾಶಗಳು ಶೇ.70 ರಷ್ಟು ಭರ್ತಿಯಾಗಿದ್ದು, ಇದರಿಂದ ಅನ್ನದಾತರ ಮೊಗದಲ್ಲೂ ಮಂದಹಾಸ ಮೂಡಿ ಬಂದಿದೆ.

j3tvkannada
ಕಲಬುರಗಿಯಲ್ಲಿ ಮಾರ್ಚ್ ಮೇ ತಿಂಗಳಲ್ಲಿ ವಾಡಿಕೆಯಂತೆ 59.4 ಮಿ.ಮೀ ಆಗಬೇಕಿತ್ತು. ಆದರೆ 214 ಮಿ.ಮೀ ಮಳೆ ಸುರಿದಿದೆ. ವಾಡಿಕೆಗಿಂತ 181.6 ಮಿ.ಮೀ ಹೆಚ್ಚುವರಿ ಮಳೆಯಾಗಿದೆ. ಇನ್ನು ಜೂನ್ 16 ರವರೆಗೆ 29.7 ಮಿ.ಮೀ ವಾಡಿಕೆಯಂತೆ ಮಳೆಯಾಗಬೇಕಿತ್ತು. ಆದರೆ 32.3 ಮಳೆ ಸುರಿದಿದೆ. ಇನ್ನು ಯಾದಗಿರಿಯಲ್ಲಿ ಮಾರ್ಚ್-ಮೇ ತಿಂಗಳಲ್ಲಿ ವಾಡಿಕೆಯಂತೆ 60.3 ಮಿ.ಮೀ ಮಳೆಯಾಗಬೇಕಿತ್ತು. ಆದರೆ 194.8 ಮಿ.ಮೀ ಮಳೆಯಾಗಿದೆ.
ಜೂನ್ 16 ರವರೆಗೆ 49.9 ವಾಡಿಕೆಯಂತೆ ಮಳೆ ಆಗಬೇಕಿತ್ತು 46.4 ಮಿ.ಮೀ ಆಗಿದೆ. ಬೀದರ್ ಜಿಲ್ಲೆಯಲ್ಲಿ ಮಾರ್ಚ್- ಮೇ ತಿಂಗಳಲ್ಲಿ ವಾಡಿಕೆಯಂತೆ 59.6 ಆಗಬೇಕಿತ್ತು, 136.4 ಮಿ.ಮೀ ಮಳೆಯಾಗಿದೆ. ಜೂನ್16 ರವರೆಗೆ ವಾಡಿಕೆಯಂತೆ 61.3 ವಾಡಿಕೆಯಂತೆ ಆಗಬೇಕಿತ್ತು, 50 ಮಿ.ಮೀ ಆಗಿದೆ. ಮೂರೂ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಇದರಿಂದ ಮುಂಗಾರು ಇನ್ನೂ ಆರಂಭವಾಗುವ ಮುನ್ನ ಮಳೆ ಉತ್ತಮವಾದ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ನೀರು ಹೆಚ್ಚು ಹರಿದು ಬಂದಿದೆ.
ಹಲವು ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಭೀಮಾ ಜಲಾಶಯಕ್ಕೆ 6000 ಕ್ಯೂಸೆಕ್ ನೀರು ಒಳ ಹರಿವಿದ್ದು, ಹೊರ ಹರಿವೂ 6,000 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಸಮಾನ ನೀರು ಕಾಯ್ದುಕೊಳ್ಳಲಾಗುತ್ತಿದೆ. ಅಮರ್ಜಾ 54.17 ಕ್ಯೂಸೆಕ್, ಬೆಣ್ಣೆತೊರಾ 510 ಕ್ಯೂಸೆಕ್ ಗಂಡೋರಿನಾಲಾ 83.20 ಕ್ಯುಸೆಕ್, ಮುಲ್ಲಾಮಾರಿ ಕೆಳದಂಡೆ 88 ಕ್ಯುಸೆಕ್, ಕಾರಂಜಾ 290 ಕ್ಯೂಸೆಕ್, ಹತ್ತಿಕುಣಿ 32 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಿದೆ. ಮೇ ತಿಂಗಳಲ್ಲಿಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಭೀಮಾ ಜಲಾಶಯಕ್ಕೆ ನೀರು ಹರಿದು ಬಂದಿದೆ. ಮೇಲ್ಭಾಗದಿಂದಲೂ 6000 ಕ್ಯೂಸೆಕ್ನಷ್ಟು ಜಲಾಶಯಕ್ಕೆ ಒಳ ಹರಿವಿದೆ. ಶೇ.70 ರಷ್ಟು ಜಲಾಶಯ ಭರ್ತಿಯಾಗಿದೆ ಎಂದಿದ್ದಾರೆ ಸಂತೋಷ ಕುಮಾರ ಸಜ್ಜನ್, ಇ.ಇ ಭೀಮಾ ಏತ ನೀರಾವರಿ.