
ಬೆಳಗಾವಿ: ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವಂತೆಯೇ ಸಂಚಾರ ಸಮಸ್ಯೆಯೂ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ನಗರ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಸಾಮಾನ್ಯ ಎಂಬಂತಾಗಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿಗೆ ನೆರೆ ರಾಜ್ಯಗಳಿಂದಲೂ ಸಾಕಷ್ಟು ಪ್ರಯಾಣಿಕರು ಬರುತ್ತಿದ್ದು, ಮಾರುಕಟ್ಟೆ ಪ್ರದೇಶದಲ್ಲಂತೂ ಜನ ಜಂಗುಳಿ ಆಗುತ್ತಿದೆ. ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ರೋಸಿ ಹೋಗಿದ್ದಾರೆ.

j3tvkannada
ಸಾಂಬ್ರಾ ವಿಮಾನ ನಿಲ್ದಾಣದಿಂದ ಗಾಂಧಿ ನಗರ ಮಾರ್ಗವಾಗಿ ಹಾಗೂ ಮಹಾಂತೇಶ ನಗರದ ಸೇತುವೆ, ಅಶೋಕ ವೃತ್ತ ಮಾರ್ಗವಾಗಿ ಕೇಂದ್ರ ಬಸ್ ನಿಲ್ದಾಣ ಸಂಪರ್ಕಿಸುವ ಮತ್ತು ಹಳೇ ಪಿ.ಬಿ. ರಸ್ತೆಯಿಂದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಮಾರ್ಗದಲ್ಲಿ ಪ್ರತಿ ದಿನವೂ ವಾಹನ ದಟ್ಟಣೆ ಉಂಟಾಗುತ್ತಿದ್ದು ಗಂಟೆ ಗಟ್ಟಲೇ ಪ್ರಯಾಣಿಕರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ಇದರಿಂದಾಗಿ ಸರಕಾರಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ ಹಾಗೂ ನಾಗರಿಕರಿಗೆ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.
ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆ ಮಾರ್ಗ ಬದಲಾವಣೆ ಹಾಗೂ ಏಕ ಮುಖ ಸಂಚಾರ ಸೇರಿದಂತೆ ಏನೇ ಕ್ರಮ ಕೈಗೊಂಡರು ಸಂಚಾರದಲ್ಲಿ ಶಿಸ್ತು ಕಾಣುತ್ತಿಲ್ಲ. ಸೂಚನಾ ಫಲಕಗಳಿದ್ದರೂ ಸವಾರರು ಪಾಲಿಸುತ್ತಿಲ್ಲ. ಬೇಕಾ ಬಿಟ್ಟಿಯಾಗಿ ವಾಹನಗಳ ನಿಲುಗಡೆ ಮಾಡುತ್ತಿದ್ದು ಇದರಿಂದಾಗಿ ಕೇಂದ್ರ ಬಸ್ ನಿಲ್ದಾಣ, ಅಶೋಕ ವೃತ್ತ, ರೈಲ್ವೆ ನಿಲ್ದಾಣದ ಸುತ್ತಲಿನ ಪ್ರದೇಶ, ಕೊಲ್ಲಾಪುರ ರಸ್ತೆ, ಜೀಜಾಮಾತಾ ವೃತ್ತ, ಫೋರ್ಟ್ ರಸ್ತೆ, ಸಾಂಬ್ರಾ ರಸ್ತೆ, ಗಾಂಧಿ ನಗರ, ಹಣ್ಣಿನ ಮಾರುಕಟ್ಟೆ, ಹಳೆ ಭಾಜಿ ಮಾರುಕಟ್ಟೆ, ಖಡೇಬಜಾರ್ ಸೇರಿದಂತೆ ಇಡೀ ನಗರದಲ್ಲಿಯೇ ಸಂಚಾರ ಸಮಸ್ಯೆ ತಾಂಡವ ಆಡುತ್ತಿದೆ.

j3tvkannada
ಸಂಚಾರ ಸುಗಮಗೊಳಿಸಲೆಂದು ಪೊಲೀಸರು ಅಶೋಕ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮಾರ್ಗ ಬದಲಾವಣೆ ಮಾಡಿದ್ದಾರೆ. ಈ ಮೊದಲು ಅಶೋಕ ವೃತ್ತ ಮಾರ್ಗವಾಗಿ ಗಾಂಧಿ ನಗರದ ಸರ್ವಿಸ್ ರಸ್ತೆ ಮೂಲಕ ಹೆದ್ದಾರಿ ಸೇರುತ್ತಿದ್ದ ವಾಹನಗಳು ಇದೀಗ ಮಹಾಂತೇಶ ನಗರದ ಸೇತುವೆ ಮೂಲಕ ಸೇರುವಂತಾಗಿದೆ. ಕಟ್ಟು ನಿಟ್ಟಾಗಿ ಇದು ಪಾಲನೆಯಾಗಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಆದರೆ ಬ್ಯಾರಿಕೇಡ್ ಅಳವಡಿಸಿರುವ ಕೂಗಳತೆ ದೂರದಲ್ಲೇ ತಿರುವು ಇದ್ದು ಅಲ್ಲಿ ಬಹುತೇಕ ವಾಹನ ಚಾಲಕರು ಸಂಚಾರ ಮಾಡುತ್ತಾರೆ.
ಇದರಿಂದಾಗಿ ಬ್ಯಾರಿಕೇಡ್ ಅಳವಡಿಸಿರುವ ಆಶಯ ಈಡೇರುತ್ತಿಲ್ಲ. ಭೂಸ್ವಾಧೀನ ಪರಿಹಾರ ತಾರತಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿ ಉದ್ಯಾನ ಸಮೀಪದ ಮಹಾತ್ಮಫುಲೆ ಮಾರ್ಗದಿಂದ ಹಳೇ ಪಿ.ಬಿ ರಸ್ತೆ ಸಂಪರ್ಕಿಸುವ ಎಸ್.ಪಿ.ಎಂ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬೆಳಗಾವಿ ದಕ್ಷಿಣ ಭಾಗದಲ್ಲಿಯೂ ಸಂಚಾರ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಈ ಮಾರ್ಗದಲ್ಲಿನ ರಸ್ತೆ ಆರಂಭವಾದಾಗಿನಿಂದ ಶಿವಾಜಿ ಉದ್ಯಾನ, ಕಪಿಲೇಶ್ವರ ಮಂದಿರ, ಶನಿಮಂದಿರ ಹಾಗೂ ಹೇಮುಕಲಾನಿ ಚೌಕ್ ಮಾರ್ಗವಾಗಿ ನಗರದಲ್ಲಿನ ಮುಖ್ಯ ಮಾರುಕಟ್ಟೆ ಪ್ರವೇಶಕ್ಕೂ ಅನುಕೂಲವಾಗಿತ್ತು. ಆದರೆ ಇದೀಗ ಈ ರಸ್ತೆ ಬಂದ್ ಮಾಡಿದ್ದರಿಂದ ಹಳೇ ಬೆಳಗಾವಿ ಪ್ರದೇಶದಿಂದ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸುವವರು ಹಾಗೂ ನಗರದ ಮುಖ್ಯ ರಸ್ತೆಗಳನ್ನೇ ಬಳಸುವಂತಾಗಿದೆ. ಇದರಿಂದಾಗಿ ಮುಖ್ಯ ರಸ್ತೆಗಳಲ್ಲಿನ ಸಿಗ್ನಲ್ಗಳಲ್ಲಿ ವಾಹನಗಳ ಸಾಲು ಸಾಲು ಕಂಡು ಬರುತ್ತಿದೆ.
ನಗರದ ಟ್ರಾಫಿಕ್ ಕಿರಿಕಿರಿ ತಗ್ಗಿಸಲೆಂದೇ ರಾಷ್ಟ್ರೀಯ ಹೆದ್ದಾರಿಯಿಂದ ಅಶೋಕ ವೃತ್ತ, ಕೇಂದ್ರ ಬಸ್ ನಿಲ್ದಾಣ ಹಾಗೂ ಚನ್ನಮ್ಮ ವೃತ್ತ ಮಾರ್ಗವಾಗಿ ಫ್ಲೈ ಓವರ್ ನಿರ್ಮಾಣ ಹಾಗೂ ನಗರದಲ್ಲಿ ಎರಡು ಕಡೆ ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಜನಪ್ರತಿನಿಧಿಗಳು ವರ್ಷದಿಂದ ಹೇಳುತ್ತಿದ್ದಾರೆ. ಆದರೆ ಈ ವರೆಗೂ ಉಭಯ ಯೋಜನೆಗಳ ಕಾಮಗಾರಿ ಬಗ್ಗೆ ಸ್ಪಷ್ಟತೆಯಿಲ್ಲ. ನಗರದ ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಸ್ಥಳಗಳಲ್ಲೇ ನಿಲುಗಡೆ ಮಾಡಬೇಕು. ಏಕಮುಖ ಸಂಚಾರ ನಿಮಯ ಪಾಲನೆ ಮಾಡಬೇಕು. ಸಾರ್ವಜನಿಕರು ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದಿದ್ದಾರೆ ನಿರಂಜನ್ ರಾಜೆ ಅರಸ್, ಡಿ.ಸಿ.ಪಿ, ಸಂಚಾರ ಮತ್ತು ಅಪರಾಧ ವಿಭಾಗ ಬೆಳಗಾವಿ.