
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಹಾಗೂ ಕೇಂದ್ರ ಸರಕಾರದ ಜೀವ ವಿಮೆ, ಅಪಘಾತ ವಿಮೆಗಳನ್ನು ಕಡ್ಡಾಯವಾಗಿ ಮಾಡಿಸಲು ನಿರ್ಧರಿಸಲಾಗಿದೆ. ಬೆಂಗಳೂರು ವಿ.ವಿಯಲ್ಲಿ 54 ವಿಭಾಗಗಳಿದ್ದು ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಸೇರಿದಂತೆ 4 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಬೆಂಗಳೂರು ವಿ.ವಿ ಆರೋಗ್ಯ ವಿಮೆಯ ವೆಚ್ಚ ಭರಿಸಲು ಕಷ್ಟವಾಗುವುದರಿಂದ ವಿದ್ಯಾರ್ಥಿಗಳು ಪಾವತಿಸುವ ವಾರ್ಷಿಕ ಶುಲ್ಕದಲ್ಲಿಆರೋಗ್ಯ ವಿಮೆಯ ಶುಲ್ಕ ಸೇರ್ಪಡೆ ಮಾಡಲು ನಿರ್ಧರಿಸಿದೆ. ಕಳೆದ ಸಿಂಡಿಕೇಟ್ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ.

j3tvkannada
ಆದರೆ ಇದರಲ್ಲಿ ಸೀಮಿತ ಕವರೇಜ್ ಸಿಗುವುದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಖಾಸಗಿ ವಿಮಾ ಕಂಪನಿಗಳ ಜತೆ ಮಾತುಕತೆ ನಡೆಸಲು ಬೆಂಗಳೂರು.ವಿ.ವಿ ನಿರ್ಧರಿಸಿದೆ. ಇದರ ಹೊರತಾಗಿ ವಿಶ್ವ ವಿದ್ಯಾಲಯಗಳ ಎಲ್ಲಾ ವಿಭಾಗಗಳ ಹಾಗೂ ಸಂಯೋಜಿತ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ‘ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ’ಯಡಿ ವಿಮೆಗೆ ಕಡ್ಡಾಯವಾಗಿ ನೋಂದಾಯಿಸಲು ಕ್ರಮ ವಹಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ 2017 ರಲ್ಲೇ ಆರೋಗ್ಯ ವಿಮೆ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಸಮಿತಿಯನ್ನೂ ರಚಿಸಿತ್ತು. ಸಮಿತಿಯು ಆರೋಗ್ಯ ವಿಮೆಯ ಪ್ರೀಮಿಯಂ ಎಷ್ಟಿರಬೇಕು? ಇದರಲ್ಲಿ ವಿದ್ಯಾರ್ಥಿ ಮತ್ತು ವಿಶ್ವ ವಿದ್ಯಾಲಯ ಪ್ರಮಾಣ ಎಷ್ಟಿರಬೇಕು ಎಂಬುದರ ಕುರಿತು ಸಮಿತಿಯು ಸಭೆ ಸೇರಿ ಚರ್ಚಿಸಿ ವಿ.ವಿ ಗೆ ವರದಿ ನೀಡಿದ್ದಾರೆ. ಆದರೆ ಆನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ.

j3tvkannada
ವಿಶ್ವ ವಿದ್ಯಾಲಯವು ಆರೋಗ್ಯ ವಿಮೆ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡದೆ ವಿ.ವಿದ್ಯಾಲಯವೇ ಹೆಚ್ಚಿನಾಂಶದ ಹಣವನ್ನು ಪಾವತಿಸಬೇಕು. ಜತೆಗೆ ವಿಶ್ವ ವಿದ್ಯಾಲಯ ಆವರಣದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸಿ ಕೊಡಬೇಕು ಎಂಬುದು ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಆಗ್ರಹವಾಗಿದೆ. ನಮ್ಮಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಬಡವರಾಗಿದ್ದು ಸ್ವಂತ ಖರ್ಚಿನಲ್ಲಿ ಆರೋಗ್ಯ, ಜೀವ ವಿಮೆ, ಅಪಘಾತದಂತಹ ವಿಮೆಗಳನ್ನು ಮಾಡಿಸುವುದು ತೀರಾ ಕಷ್ಟ. ಇನ್ನು ಸದ್ಯದ ಪರಿಸ್ಥಿತಿಯಲ್ಲಿ ವಿವಿ ಹೆಚ್ಚಿನ ಹಣ ವ್ಯಯ ಮಾಡುವುದು ಕೂಡ ಕಷ್ಟ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿಮಾ ಯೋಜನೆಯನ್ನು ವಿದ್ಯಾರ್ಥಿಗಳಿಗೆ ಮಾಡಿಸಲು ಸೂಚಿಸಲಾಗಿದೆ.
ಬೆಂವಿವಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಎಚ್.ಎನ್.ಪಾವನ ವಿವಿಯ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ವಿವಿಯ ಕುಲಪತಿ ಡಾ.ಎಸ್.ಎಂ.ಜಯಕರ 3 ಲಕ್ಷ ರೂ. ಪರಿಹಾರ ಧನ ನೀಡಿದ್ದಾರೆ. ಪಾವನ ಕುಟುಂಬ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು, ಮಾನವೀಯತೆ ದೃಷ್ಟಿಯಿಂದ ‘ಕುಲಪತಿಗಳ ವಿವೇಚನಾ ವಿದ್ಯಾರ್ಥಿ ನಿಧಿ’ ಅಡಿಯಲ್ಲಿ 3 ಲಕ್ಷ ರೂ. ಗಳನ್ನು ಪರಿಹಾರವಾಗಿ ನೀಡಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಗಮನದಲ್ಲಿಟ್ಟು ಕೊಂಡು ಆರೋಗ್ಯ, ಅಪಘಾತ ಜೀವ ವಿಮೆಗಳನ್ನು ನೋಂದಾಯಿಸಲು ವಿವಿ ಕ್ರಮ ಕೈಗೊಳ್ಳುತ್ತಿದೆ.