
ಮೈಸೂರು: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಜಿಲ್ಲಾಡಳಿತವು ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದು, ಮದುವೆಗೂ ಮುನ್ನ ಎಲ್ಲಾ ಕಲ್ಯಾಣ ಮಂಟಪ, ಛತ್ರ, ಸಮುದಾಯ ಭವನಗಳಲ್ಲಿ ವಧು ವರರ ವಯಸ್ಸಿನ ದೃಢೀಕರಣ ದಾಖಲೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಎಲ್ಲ ಸರಕಾರಿ, ಸರಕಾರೇತರ ಶಾಲಾ ಕಾಲೇಜು, ವಸತಿಯುತ ಶಾಲೆಗಳು ಹಾಗೂ ಹಾಸ್ಟೆಲ್ಗಳಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹ ತಡೆಗೆ ರಾಜ್ಯ ಸರಕಾರ ಹತ್ತಾರು ಕಾರ್ಯ ಕ್ರಮಗಳನ್ನು ರೂಪಿಸುವ ಜತೆಗೆ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಹಾಗೆಯೇ ಬಾಲ್ಯ ವಿವಾಹ ನಡೆಯದಂತೆ ಅಪ್ರಾಪ್ತರಿಗೆ ವಿವಾಹ ಮಾಡಿದವರ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿದೆ. ಇಷ್ಟಾದರೂ 2024-2025 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 284 ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿದೆ.

j3tvkannada
ಬಾಲ್ಯ ವಿವಾಹ ನಿಷೇಧಿಸಲು ಎಲ್ಲಾ ಕಲ್ಯಾಣ ಮಂಟಪ, ಸಮುದಾಯ ಭವನ, ಪಾರ್ಟಿ ಹಾಲ್, ಛತ್ರ, ಶಾಮಿಯಾನ ಅಂಗಡಿಯವರು, ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಮದುವೆಗಾಗಿ ಕಾಯ್ದಿರಿಸುವ ಮೊದಲು ಛಾಯಾಚಿತ್ರ ತೆಗೆಯುವವರು ಆರ್ಡರ್ ತೆಗೆದುಕೊಳ್ಳುವ ಮುನ್ನ ಹಾಗೂ ಪ್ರಿಂಟಿಂಗ್ ಪ್ರೆಸ್ನವರು ಲಗ್ನ ಪತ್ರಿಕೆ ಮುದ್ರಿಸುವ ಮುಂಚೆ ವಧು ವರರ ವಯಸ್ಸಿನ ದೃಢೀಕರಣ ದಾಖಲೆಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ನಿಯಮಾವಳಿಯನ್ನು ಉಲ್ಲಂಘಿಸಿದರೆ ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಕಲಂ 11 ರಡಿಯಲ್ಲಿ ಬಾಲ್ಯ ವಿವಾಹ ಬೆಂಬಲಿಸಿದ್ದಕ್ಕೆ 2 ವರ್ಷದವರೆಗೂ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ಅಥವಾ ಎರಡೂ ರೀತಿಯ ಶಿಕ್ಷೆ ವಿಧಿಸಲಾಗುವುದು. ಜತೆಗೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಜಿಲ್ಲೆಯ ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರಗಳಲ್ಲಿ ಹೆಚ್ಚಿನ ಬಾಲ್ಯ ವಿವಾಹ ಪ್ರಕರಣ ಕಂಡು ಬಂದಿದೆ. ಜಿಲ್ಲೆಯಲ್ಲಿ ದಾಖಲಾಗಿರುವ 284 ಪ್ರಕರಣಗಳ ಪೈಕಿ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದ 18 ಮಂದಿ ಅಪ್ರಾಪ್ತೆಯರೇ ನೇರವಾಗಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ವಿಷಯ ತಿಳಿಸಿ ಮದುವೆ ತಡೆಯುವಂತೆ ಹೇಳಿರುವುದು ವಿಶೇಷ.
ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ, ಸರಕಾರೇತರ ಶಾಲಾ-ಕಾಲೇಜುಗಳು, ವಸತಿಯುತ ಶಾಲೆಗಳು ಹಾಗೂ ಹಾಸ್ಟೆಲ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತು ಪೋಕ್ಸೊ ಕಾಯಿದೆಯ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098/112 ಘಟಕದ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.
2024-2025 ನೇ ಸಾಲಿನಲ್ಲಿ ಎಷ್ಟು ಪ್ರಕರಣ
284
ನಡೆದ ಬಾಲ್ಯ ವಿವಾಹವೆಷ್ಟು?
60
ಅಧಿಕಾರಿಗಳು ತಡೆದಿದ್ದು ಎಷ್ಟು?
224
ಬಾಲ್ಯ ವಿವಾಹ ತಡೆಗೆ ಏನೆಲ್ಲಾ ಕ್ರಮ?
- ನಗರ, ಗ್ರಾಮಾಂತರ ಭಾಗದ ಪಾಲಕರಲ್ಲಿ ಜಾಗೃತಿ.
- ವಿಶೇಷವಾಗಿ ಬಸವ ಜಯಂತಿಯಂದು ನಿಗಾ.
- ಕರಪತ್ರ ಹಂಚಿ ಮಕ್ಕಳಲ್ಲಿಅರಿವು.
- ಕಲ್ಯಾಣ ಮಂಟಪದಲ್ಲಿ ವಯಸ್ಸಿನ ದೃಢೀಕರಣ ಕಡ್ಡಾಯ.
- ಶಾಲಾ, ಕಾಲೇಜು, ಹಾಸ್ಟೆಲ್ಗಳಲ್ಲಿ ಅರಿವು ಉಪನ್ಯಾಸ.
ಬಾಲ್ಯ ವಿವಾಹದಿಂದ ಆಗುವ ಸಮಸ್ಯೆ ಕಾನೂನು ತೊಡಕುಗಳ ಬಗ್ಗೆ ಗ್ರಾಮೀಣ ಭಾಗಗಳಲ್ಲಿ ಕರಪತ್ರ ಹಂಚಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳ ಸಹಾಯವಾಣಿ ಬಂದ ಮೇಲೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಸಂಬಂಧ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ನಾವು ಕೂಡ ಅಲರ್ಟ್ ಆಗಿದ್ದೇವೆ.