
ದಕ್ಷಿಣಕನ್ನಡ(ಮಂಗಳೂರು):ಮಂಗಳೂರು ವಿಮಾನ ದುರಂತ ನಡೆದು 15 ವರ್ಷಗಳು ಕಳೆದರೂ ಪರಿಹಾರಕ್ಕಾಗಿ ಸಂತ್ರಸ್ತರ ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಇನ್ನೂ ತೆರೆ ಬಿದ್ದಿಲ್ಲ.158 ಪ್ರಯಾಣಿಕರ ಸಾವಿಗೆ ಕಾರಣವಾದ ವಿಮಾನ ಅಪಘಾತವು 2010 ರ ಮೇ 22 ರಂದು ಬೆಳಗ್ಗಿನ ಜಾವ ಸಂಭವಿಸಿತ್ತು. ದುಬೈನಿಂದ ಹೊರಟ ಎಐ 812 ವಿಮಾನವು ಮಂಗಳೂರು ಬಜಪೆ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿ ಭೀಕರ ಅಪಘಾತ ನಡೆದಿತ್ತು.

j3tvkannada.in
ಕೇರಳದ ಕಣ್ಣೂರು, ಕಾಸರಗೋಡು ಮತ್ತು ದ.ಕ. ಜಿಲ್ಲೆ ಸೇರಿದಂತೆ 160 ಪ್ರಯಾಣಿಕರು ಮತ್ತು ಆರು ವಿಮಾನ ಸಿಬ್ಬಂದಿ ಇದ್ದರು. ಈ ಪೈಕಿ 52 ಮಂದಿ ಕೇರಳಿಗರು ಸೇರಿ ಒಟ್ಟು ಎಂಟು ಮಂದಿ ಬದುಕುಳಿದಿದ್ದರು. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 72 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಆದರೆ ಪರಿಹಾರ ಇನ್ನೂ ಕುಟುಂಬಿಕರ ಕೈ ಸೇರಿಲ್ಲ. ಮಂಗಳೂರು ವಿಮಾನ ಅಪಘಾತ ಸಂತ್ರಸ್ತರ ಸಂಘವು ಮಾಂಟ್ರಿಯಲ್ ಕನ್ವೆನ್ಷನ್ ಒಪ್ಪಂದದ ಪ್ರಕಾರ ನ್ಯಾಯಯುತ ಪರಿಹಾರಕ್ಕಾಗಿ 15 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಕೇಂದ್ರ ಸರಕಾರವು ಎಲ್ಲವನ್ನೂ ಪಾವತಿಸುವುದಾಗಿ ಘೋಷಿಸಿದ್ದರೂ, ವಿಮಾ ಕಂಪನಿಯು ಏರ್ ಇಂಡಿಯಾ ನೇಮಿಸಿದ ಸಂಸ್ಥೆ ನಿರ್ಧರಿಸಿದಂತೆ ಅಲ್ಪ ಮೊತ್ತವನ್ನು ಪಾವತಿಸಲು ಮುಂದಾಯಿತು. ಆದರೆ ಈ ಬಗ್ಗೆ ಹಲವರು ಕೇರಳ ಹೈ ಕೋರ್ಟ್ ಕದ ತಟ್ಟಿದ್ದು, 2011 ರ ಜು.20 ರಂದು ಈ ಬಗ್ಗೆ ಆದೇಶ ನೀಡಿದ ಕೇರಳ ಹೈಕೋರ್ಟ್, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ 75 ಲಕ್ಷ ರೂ. ಮಧ್ಯಂತರ ಪರಿಹಾರವನ್ನು ನೀಡುವಂತೆ ಆದೇಶಿಸಿತ್ತು.
ಮಂಗಳೂರು ವಿಮಾನ ದುರಂತದ ನಂತರ ಮೃತರ ಕುಟುಂಬಗಳಿಗೆ ಪ್ರಧಾನಿ ಅವರ ರಾಷ್ಟ್ರೀಯ ಪರಿಹಾರ ಹಾನಿಯಿಂದ ತುರ್ತು ಪರಿಹಾರವಾಗಿ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ.ಗಳನ್ನು ನೀಡಲಾಗಿತ್ತು. ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಲಾ 2 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿದ್ದರು. 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ 10 ಲಕ್ಷ ರೂ. ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ.ವನ್ನು ವಿಮಾನ ಯಾನ ಸಂಸ್ಥೆಯು ತಾತ್ಕಾಲಿಕ ಪರಿಹಾರವಾಗಿ ಘೋಷಿಸಿತ್ತು. ಏರ್ ಇಂಡಿಯಾ ಕಂಪನಿಯು ಅಪಘಾತದಲ್ಲಿ ಮೃತರ ಅವಲಂಬಿತರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸೂಕ್ತ ಪರಿಹಾರ ನೀಡದೆ ಹಲವರಿಗೆ ಅಲ್ಪ ಮೊತ್ತವನ್ನು ಪಾವತಿಸುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದಾಗ ಅಬ್ದುಲ್ ಸಲಾಮ್ ಎಂಬವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಏರ್ ಇಂಡಿಯಾ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಪ್ರತಿ ಅರ್ಜಿ ಸಲ್ಲಿಸಿತ್ತು. ಆದರೂ ಪರಿಹಾರ ಮಾತ್ರ ಇನ್ನೂ ಸಿಗಲಿಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.