
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನಿರ್ಗಮಿತ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

j3tvkannada
ಕಾಲ್ತುಳಿತ ದುರಂತಕ್ಕೆ ಕಾರಣವನ್ನು ಪತ್ತೆ ಹಚ್ಚಲು ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುತ್ತಿರುವ ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಘಟನೆಗೆ ಸಂಬಂಧಿಸಿ ಜೂ.13 ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ಗಮಿತ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಜೂ.4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಕೈಗೊಂಡಿದ್ದ ಬಂದೋಬಸ್ತ್ ಭದ್ರತೆ ವಿಚಾರಗಳನ್ನು ಕುರಿತು ಮಾಹಿತಿ ಪಡೆಯುವ ಸಲುವಾಗಿ ಬಿ.ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮತ್ತು ಕೇಂದ್ರ ವಿಭಾಗದ ಡಿ.ಸಿ.ಪಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ. ಇನ್ನೊಂದೆಡೆ ತನಿಖೆ ಚುರುಕುಗೊಳಿಸಿರುವ ಸಿ.ಐ.ಡಿ ಅಧಿಕಾರಿಗಳು ಬುಧವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಾಜಿ ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜಯರಾಮ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ವಿಚಾರಣಾ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಸಿ.ಐ.ಡಿ ಕಚೇರಿಗೆ ಆಗಮಿಸಿದ್ದ ಇಬ್ಬರನ್ನೂ ಎಸ್.ಪಿ ಶುಭನ್ವಿತಾ ನೇತೃತ್ವದ ತಂಡ ಹಲವು ತಾಸುಗಳ ಕಾಲ ವಿಚಾರಣೆ ನಡೆಸಿದೆ. ಆರ್.ಸಿ.ಬಿ ವಿಜಯೋತ್ಸವ ಆಚರಣೆ ಸಂಬಂಧ ಕೈಗೊಂಡ ನಿರ್ಧಾರಗಳು ಪೊಲೀಸರಿಂದ ಪಡೆದ ಅನುಮತಿ ಹಾಗೂ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸರಣಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ. ಜತೆಗೆ ವಿಜಯೋತ್ಸವಕ್ಕೂ ಮುನ್ನ ಕೆ.ಎಸ್.ಸಿ.ಎ ವತಿಯಿಂದ ಕೈಗೊಂಡಿದ್ದ ಭದ್ರತಾ ಕ್ರಮಗಳೇನು ಕಾಲ್ತುಳಿತದ ಬಳಿಕವೂ ಕಾರ್ಯಕ್ರಮ ನಡೆಸಿದ ಕುರಿತು ಮಾಹಿತಿ ಪಡೆದಿದ್ದಾರೆ. ತನಿಖೆಗೆ ಸಂಬಂಧಿಸಿ ಅಗತ್ಯ ಬಿದ್ದರೆ ಪುನಃ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ. ಹಾಗೆಯೇ ಕೆಲವು ಲಿಖಿತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆ ಸಲುವಾಗಿ ಕೆ.ಎಸ್.ಸಿ.ಎ ಹಾಗೂ ಪೊಲೀಸರ ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ಗಾಯಾಳುಗಳನ್ನು ವಿಚಾರಣೆ ನಡೆಸಲಾಗುವುದು. ಕ್ರೀಡಾಂಗಣದ ಸಿ.ಸಿ.ಟಿ.ವಿ ಪರಿಶೀಲನೆ ನಡೆಯುತ್ತಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ 45 ಮಂದಿ ಬುಧವಾರ ಜಿಲ್ಲಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ದುರಂತ ಹೇಗೆ ಸಂಭವಿಸಿತು, ಆ ನಂತರ ರಕ್ಷಣೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಗ್ಗೆ ವಿವರಿಸಿದ್ದಾರೆ. ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗಾಯಾಳು ಮೊನೀಶ್ ಆರ್.ಸಿ.ಬಿ ವಿಜಯೋತ್ಸವಕ್ಕೆ ಟಿಕೆಟ್ ವಿತರಿಸಿದ್ದರೆ ಅಷ್ಟೊಂದು ಜನ ಸೇರುತ್ತಿರಲಿಲ್ಲ. ಪಂದ್ಯ ಗೆದ್ದ ಎರಡು ದಿನಗಳ ನಂತರ ವಿಜಯೋತ್ಸವ ಆಚರಿಸಬೇಕಿತ್ತು. ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕಿತ್ತು. ರಾಜ್ಯ ಸರಕಾರ ಮತ್ತು ಕೆ.ಎಸ್.ಸಿ.ಎ ಯಿಂದ ಸಾಕಷ್ಟು ತಪ್ಪಾಗಿದೆ ಎಂದುರು.