
ಶಿವಮೊಗ್ಗ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ತಪ್ಪಿಸಿದ್ದು ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಎಂದು ಆರೋಪಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿ.ವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಕೆ.ಎಸ್ ಈಶ್ವರಪ್ಪ ಅವರು ಅವಕಾಶ ಸಿಕ್ಕಾಗಲೆಲ್ಲಾ ಯಡಿಯೂರಪ್ಪ ಕುಟುಂಬದ ವಿರುದ್ಧ ಕಿಡಿಕಾರುತ್ತ ಬಂದಿದ್ದರು.

j3tvkannada
ಇಂದು (ಜೂನ್ 11) ಸಂಸದ ರಾಘವೇಂದ್ರ ಪುತ್ರನ ವಿವಾಹ ಸಮಾರಂಭದಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದರು. ಶಿವಮೊಗ್ಗದ ಶಿಕಾರಿಪುರದಲ್ಲಿ ಆಯೋಜಿಸಿದ್ದ ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪನವರ ಮೊಮ್ಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಭಾಗವಹಿಸಿದ್ದರು, ಈ ವೇಳೆ ಈಶ್ವರಪ್ಪರ ಹೆಗಲ ಮೇಲೆ ಕೈ ಹಾಕಿ ಯಡಿಯೂರಪ್ಪ ಮಾತನಾಡಿದ್ದಾರೆ. ಮಾತ್ರವಲ್ಲ ಶಾಲು ಹಾಕಿ ಧನ್ಯವಾದವನ್ನೂ ಯಡಿಯೂರಪ್ಪನವರು ತಿಳಿಸಿದರು. ಬಳಿಕ ನೂತನ ಜೋಡಿಗೆ ಶುಭ ಕೋರಿ, ಆ ನಂತರ ನವ ಜೋಡಿಯ ಜೊತೆ ಯಡಿಯೂರಪ್ಪ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡ ಪ್ರಸಂಗ ನಡೆಯಿತು.
ನವ ವಧು ವರರ ಜೊತೆಗೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರು ಪೊಟೋ ತೆಗೆಸಿಕೊಂಡರು. ಬಳಿಕ ವೇದಿಕೆಯಿಂದ ಕೆಳಕೆ ಬರ್ತಾ ಇದ್ದಂತೆ ಎದುರಿಗೆ ಸಿಕ್ಕ ವಿಜಯೇಂದ್ರ ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ವಿಜಯೇಂದ್ರ ಬೆನ್ನು ತಟ್ಟಿ ಶುಭಹಾರೈಸಿದರು. ಈಶ್ವರಪ್ಪ ಪುತ್ರ ಕಾಂತೇಶ್ ವೇದಿಕೆ ಮೇಲೆ ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಬಹಳ ದಿನಗಳ ಬಳಿಕ ಉಭಯ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಮಾಜಿ ಸಚಿವ ಈಶ್ವರಪ್ಪ ಅವರನ್ನು ಈಗಾಗಲೇ ಬಿ.ಜೆ.ಪಿಯಿಂದ ಉಚ್ಚಾಟನೆ ಮಾಡಲಾಗಿದೆ.
ಲೋಕಸಭೆಯಲ್ಲಿ ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ಯಡಿಯೂರಪ್ಪ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದರು. ಆ ನಂತರ ಈಶ್ವರಪ್ಪನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಸದ್ಯ, ಯಡಿಯೂರಪ್ಪ ಜೊತೆಗಿನ ಈ ಒಂದು ಭೇಟಿ ಮೂಲಕ ಮತ್ತೆ ಬಿಜೆಪಿಗೆ ಹತ್ತಿರವಾಗ್ತಾರ ಎಂದು ಕಾದುನೋಡಬೇಕಿದೆ. ಯಡಿಯೂರಪ್ಪ ಮತ್ತುಈಶ್ವರಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಖಾಸಗಿ ಕಾರ್ಯಕ್ರಮ ಆಗಿರೋದ್ರಿಂದ ರಾಘವೇಂದ್ರ ಅವ್ರು ಈಶ್ವರಪ್ಪಗೆ ಆಹ್ವಾನ ಕೊಟ್ಟಿದ್ರು ರಾಜಕೀಯ ಹೊರತಾಗಿ ಈ ರೀತಿಯ ಸಂಬಂಧಗಳು ಇರಬೇಕು. ಈಶ್ವರಪ್ಪ ಪಕ್ಷಕ್ಕೆ ಬರುವ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡಬೇಕು ಎಂದು ಹೇಳಿದರು.