
ಕಲಬುರುಗಿ: ದೇವನೂರು ಮಹಾದೇವ ಅವರು ಕೇವಲ ಸಾಹಿತಿ ಮಾತ್ರವಲ್ಲದೆ, ದಲಿತ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಹೋರಾಟಗಾರರೂ ಆಗಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ಸಂಘಟಕರು. ಅವರ ಬರವಣಿಗೆಯು ದಲಿತರ ಮೇಲಿನ ಶೋಷಣೆ, ಕ್ರೌರ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವ ಮೂಲಕ ಪ್ರಗತಿಶೀಲ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಉಪನ್ಯಾಸಕ, ಪ್ರಗತಿಪರ ಚಿಂತಕ ಎಚ್.ಬಿ.ಪಾಟೀಲ ಅವರು ಹೇಳಿದರು.

j3tvkannada
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಸಾಹಿತಿ ದೇವನೂರು ಮಹಾದೇವ ಅವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ‘ದೇವನೂರು ಅವರ ಬದುಕು-ಬರಹ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ, ಶಿಕ್ಷಣ ಮತ್ತು ಅಂಬೇಡ್ಕರ್ ಅವರ ಚಳವಳಿಯ ಪ್ರಭಾವದಿಂದ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿತು. ಈ ಜಾಗೃತಿಯಿಂದ ದಲಿತ ಲೇಖಕರು ತಮ್ಮ ಬದುಕಿನ ಅಸಮತೋಲನಗಳನ್ನು ಸಾಹಿತ್ಯದಲ್ಲಿ ಅನಾವರಣಗೊಳಿಸಲು ಪ್ರಾರಂಭಿಸಿದರು. ದೇವನೂರು ಮಹಾದೇವ ಅವರ ಬರವಣಿಗೆಯು ಈ ಚಲನೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಶತಮಾನಗಳಿಂದ ದಲಿತರನ್ನು ಕಾಡುತ್ತಿದ್ದ ಅಸ್ಪೃಶ್ಯತೆ, ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಗಳನ್ನು ಅವರು ತಮ್ಮ ಕಥೆಗಳಲ್ಲಿ ಆಳವಾಗಿ ಚಿತ್ರಿಸಿದ್ದಾರೆ ಎಂದರು.
ದೇವನೂರು ಅವರು ಒಡಲಾಳ,ಕುಸುಮಬಾಲೆ, ದ್ಯಾವನೂರು, ಮಾರಿಕೊಂಡವರು, ದತ್ತ, ಡಾಂಬರ, ಬಂದರು, ಅಮಾಸ, ಮೂಡಲ ಸೀಮೆಯಲ್ಲಿ, ಕೊಲೆ-ಗಿಲೆ, ಗ್ರಾಮಸ್ಥರು, ಎದೆಗೆ ಬಿದ್ದ ಅಕ್ಷರ, ನೋಡು ಮತ್ತು ಕೂಡು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಲ್ಲಮಪ್ರಭು ಪ್ರಶಸ್ತಿ, ಬೋಧಿವೃಕ್ಷ ಪ್ರಶಸ್ತಿ, ವಿ,ಎಂ.ಇನಾಂದಾರ್ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ, ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ದೇವನೂರು ಅವರ ಬದುಕು-ಬರಹ, ಸಾಮಾಜಿಕ ಕೊಡುಗೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಓಂಕಾರ ವಠಾರ, ತರಬೇತಿ ಸಂಸ್ಥೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಇನ್ನು ಮುಂತಾದವರು ಇದ್ದರು.