
ಬೆಂಗಳೂರು ಗ್ರಾಮಾಂತರ: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗರ್ಭಿಣಿ ಜೀಬ್ರಾ ಮೃತಪಟ್ಟಿದೆ. ಮೂರುವರೆ ವರ್ಷದ ಕಾವ್ಯ ಮೃತ ಪಟ್ಟ ಜೀಬ್ರಾ. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಜೀಬ್ರಾ ಇನ್ನೂ ಕೆಲವೇ ದಿನಗಳಲ್ಲಿ ಮರಿ ಜೀಬ್ರಾಗೆ ಜನ್ಮ ನೀಡುತಿತ್ತು. ಕಾಡಿನ ಚಿರತೆಗಳು ಮೃಗಾಲಯದ ಸುತ್ತ ಓಡಾಡುತ್ತಿವೆ. ಇದರ ಭಯದಿಂದ ಓಡಿದಾಗ ತಡೆ ಬೇಲಿಗೆ ಡಿಕ್ಕಿಯಾಗಿ ಗರ್ಭಿಣಿ ಜೀಬ್ರಾ ಮೃತಪಟ್ಟಿದೆ.

j3tvkannada
ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ಗಂಡು ಮತ್ತು ಆರು ಹೆಣ್ಣು ಜೀಬ್ರಾ ಸೇರಿದಂತೆ ಒಟ್ಟು ಎಂಟು ಜೀಬ್ರಾಗಳಿವೆ. ಬನ್ನೇರುಘಟ್ಟ ಝೂ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿದ್ದು, ಕಾಡಿನ ಚಿರತೆಗಳು ಝೂ ಸುತ್ತ ಒಡಾಡುತ್ತಿರುವುದು ಸಿ.ಸಿಟಿವಿಯಲ್ಲೂ ಪತ್ತೆಯಾಗಿದೆ. ಇದರಿಂದಾಗಿ ಝೂನಲ್ಲಿ ಸಸ್ಯಹಾರಿ ಪ್ರಾಣಿಗಳು ಭಯಗೊಳ್ಳುತ್ತಿವೆ. ಅದೇ ರೀತಿ ಚಿರತೆ ಓಡಾಟದಿಂದಾಗಿ ಜೀಬ್ರಾ ಗಾಬರಿಗೊಂಡು ಓಡಿದ್ದು, ತಡೆ ಬೇಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆ ಇದೇ ಎನ್ನಲಾಗಿದೆ. ಚಿರತೆ ಓಡಾಟದ ದೃಶ್ಯ ಕ್ಯಾಮರಾ ಟ್ರ್ಯಾಪ್ ನಲ್ಲಿ ಪತ್ತೆಯಾಗಿದೆ. ಈಗಾಗಲೇ ಝೂ ಸುತ್ತಲೂ ಕಾಂಪೌಂಡ್, ಸೋಲಾರ್ ತಂತಿ ಅಳವಡಿಸಿದ್ದರು ಕೆಲವು ಕಡೆಗಳಲ್ಲಿ ಚಿರತೆಗಳ ಓಡಾಟ ಇದೇ. ಕಾಡು ಪ್ರಾಣಿಗಳಿಂದ ಝೂನಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಬನ್ನೇರುಘಟ್ಟ ಸುತ್ತ ಮುತ್ತ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಹಲವು ಗ್ರಾಮಗಳಿಗೂ ಚಿರತೆಗಳು ಬೇಟಿ ನೀಡುತ್ತಿವೆ. ಪ್ರಮುಖವಾಗಿ ಬನ್ನೇರುಘಟ್ಟ ಮೃಗಾಲಯದಲ್ಲಿ ಹಲವು ಸಂರಕ್ಷಿತ ವನ್ಯ ಪ್ರಾಣಿಗಳು ಇರುವ ಕಾರಣ ಕಾಡಿನ ಚಿರತೆಗಳು ಇದೇ ಸ್ಥಳದಲ್ಲಿ ಹೆಚ್ಚು ಓಡಾಡುತ್ತಿವೆ. ಚಿರತೆ ಆಗಮನದಿಂದ ತಡೆಗೋಡೆ ಒಳಗಿರುವ ವನ್ಯ ಮೃಗಗಳು ಭಯಗೊಂಡು ದಿಕ್ಕಾ ಪಾಲಾಗಿ ಓಡುತ್ತಿವೆ. ಇದರಿಂದ ಗರ್ಭಿಣಿ ಮೃಗಗಳಿಗೆ ಅಪಾಯ ಹೆಚ್ಚಾಗುತ್ತದೆ.
ಬನ್ನೇರುಘಟ್ಟ ಸುತ್ತ ಮುತ್ತಲಿನ ಪ್ರದೇಶದಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕಾರಣ ಜನರಲ್ಲಿ ಆತಂಕವೂ ಹೆಚ್ಚಾಗಿದೆ. ಇದೀಗ ಅರಣ್ಯ ಅಧಿಕಾರಿಗಳು ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.