
ಹಾವೇರಿ: ಈ ಬಾರಿ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಜೋರಾಗಿ ಸುರಿದಿದ್ದು ಈಗಾಗಲೇ ರೈತರು ಹೊಲಗಳಲ್ಲಿ ಬಿತ್ತನೆ ಕೆಲಸಗಳನ್ನು ಆರಂಭಿಸಿದಾರೆ. ಹಾವೇರಿಯಲ್ಲೂ ಈ ಬಾರಿ ಉತ್ತಮ ಮಳೆಯಾಗಿದ್ದು, ಹೊಲಗಳಲ್ಲಿ ಬಿತ್ತನೆ ಕೆಲಸ ಆರಂಭವಾಗಿದೆ. ಆದರೆ ಇಲ್ಲಿ ಹೊಲಗಳಿಗೆ ಹೋಗುವ ರಸ್ತೆ ಮಳೆ ನೀರಿಗೆ ಆಹುತಿಯಾಗಿ ಸಂಪೂರ್ಣ ಕೆಟ್ಟು ಹೋಗಿದೆ.

j3tvkannada.in
ರಸ್ತೆಗಳು ಕೂಡಾ ಹೊಲದಂತೆಯೇ ಕೆಸರುಮಯವಾಗಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಹಾವೇರಿ ಜಿಲ್ಲಾದ್ಯಂತ ಬಹುತೇಕ ಜನರು ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಇದೀಗ ಹೊಲಗಳಿಗೆ ಹೋಗಲು ರಸ್ತೆಯೇ ಸರಿ ಇಲ್ಲದೆ ಹೊಲಗಳಿಗೆ ಓಡಾಡಲು ಕಷ್ಟಕರವಾಗಿದೆ. ರಾಣೆಬೆನ್ನೂರು, ಹಾನಗಲ್, ಹಾವೇರಿ ಹಿರೇಕೆರೂರು, ಬ್ಯಾಡಗಿ ಶಿಗ್ಗಾವಿ, ಹಾಗೂ ಸವಣೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹೊಲಗಳಿಗೆ ಹೋಗುವ ರಸ್ತೆಗಳು ಹಾಳಾಗಿರುವುದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಹಲವು ಕಡಗಳಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಮುಂಗಾರು ಮುಂಚಿತ ಮಳೆಗೆ ರಸ್ತೆಗಳು ಕಿತ್ತು ಹೋಗಿವೆ. ರಸ್ತೆಗಳು ತಗ್ಗು ಬಿದ್ದು ರೈತರು ವಾಹನಗಳಲ್ಲಿ ಓಡಾಡದ ಸ್ಥಿತಿ ಒದಗಿದೆ. ಬೀಜ ಗೊಬ್ಬರಗಳನ್ನೆಲ್ಲಾ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
ಸ್ಥಳೀಯ ಜನರು, ಜನಪ್ರತಿನಿಧಿಗಳು ಇದೀಗ ಅಧಿಕಾರಿಗಳ ಬಳಿ ಅಲೆದಾಡುತ್ತಿದ್ದಾರೆ. ಆದರೆ ಈಗಾಗಲೇ ರಸ್ತೆ ಮಾಡಲಾಗಿದೆ, ಇನ್ನೊಮ್ಮೆ ರಸ್ತೆ ಮಾಡಲಾಗುವುದಿಲ್ಲ ಎಂಬ ಮಾತು ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ರೈತರ ಹೆಸರಿನಲ್ಲಿ ಕಾಟಾಚಾರಕ್ಕೆ ರಸ್ತೆ ಕೆಲಸ ಮಾಡಿದ ಗುತ್ತಿಗೆದಾರರು ಇದೀಗ ನಾಪತ್ತೆಯಾಗಿದ್ದಾರೆ. ಈ ರಸ್ತೆ ರೈತರಿಗೆ ಬಳಕೆಯಾಗುತ್ತಿದೆಯೋ ಇಲ್ಲವೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹಾನಗಲ್ ತಾಲೂಕಿನ ಹುಲ್ಲತ್ತಿ ರೈತರೊಬ್ಬರು ಹೇಳಿದ್ದಾರೆ. ಇದೀಗ ಶಗ್ಗಾವಿ ತಾಲೂಕಿನ ಚಂದಾಪುರದ ರೈತ ಭರಮಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.