
ಬೆಂಗಳೂರು: ಬಡ ವರ್ಗದ ಜನರಿಗೆ ಅದರಲ್ಲೂ ಕ್ಯಾನ್ಸರ್ ಪೀಡಿತರಿಗೆ, ವೃದ್ಧರಿಗೆ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿದ್ದು, ಮನೆ ಬಾಗಿಲಿಗೆ ಒ.ಪಿ.ಡಿ ಸೌಲಭ್ಯ ನೀಡಲು ಮುಂದಾಗಿದೆ. ಹೀಗಾಗಿ ಸಿ.ವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಆಯಾ ಏರಿಯಾಗಳಲ್ಲಿ ಚಿಕಿತ್ಸೆ ನೀಡಲು ಸಜ್ಜಾಗಿದೆ.

j3tvkannada
ಕರ್ನಾಟಕದಲ್ಲೇ ಮೊದಲ ಬಾರಿಗೆ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಉಚಿತ ಒ.ಪಿ.ಡಿ ಚಿಕಿತ್ಸೆ ನೀಡಲು ಮುಂದಾಗಿದೆ. ಪೈಲೆಟ್ ಯೋಜನೆಯಡಿ ಸಿ.ವಿ ರಾಮನ್ ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ ಒ.ಪಿ.ಡಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ವಯೋವೃದ್ಧರು, ಕ್ಯಾನ್ಸರ್ ಪೀಡಿತರು, ಬ್ರೇನ್ ಹ್ಯಾಮರೇಜ್ ಸೇರಿದ್ದಂತೆ ಗಂಭೀರ ಸಮಸ್ಯೆಯಿಂದ ಬಳಲುವ ರೋಗಿಗಳು ಇನ್ಮುಂದೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕಿಲ್ಲ. ಮನೆಯ ಬಳಿಯೇ ಒ.ಪಿ.ಡಿ ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಗೆ ಬಂದಾಗ ಕ್ಯೂನಲ್ಲಿ ನಿಂತು ಕಾಯುವ ಪರಿಸ್ಥಿತಿ ಇರುತ್ತದೆ. ಈ ಹಿನ್ನೆಲೆ ಅಂತವರಿಗಾಗಿ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗಿ ಈ ಸೇವೆ ನೀಡಲು ಇಲಾಖೆ ನಿರ್ಧರಿಸಿದೆ. ಸದ್ಯ ಸಿ.ವಿ ರಾಮನ್ ನಗರ ಆಸ್ಪತ್ರೆಯಿಂದ 5ಕ್ಕೂ ಹೆಚ್ಚು ಕಡೆಗಳಲ್ಲಿ ಸೇವೆ ನೀಡಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಸೇವೆಯನ್ನು ವಿಸ್ತರಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದು ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಜೇಶ್ ಹೇಳಿದ್ದಾರೆ.
ಈ ಯೋಜನೆಯಿಂದ ಬಡ ಜನರಿಗೆ ತುಂಬಾ ಸಹಾಯವಾಗಲಿದೆ. ಹೀಗಾಗಿ ಸರ್ಕಾರ ಬೆಂಗಳೂರಿನ ಎಲ್ಲಾ ಏರಿಯಾಗಳಲ್ಲಿಯೂ ಈ ಸೇವೆಯನ್ನು ಜಾರಿಗೆ ತರಬೇಕು ಎಂದು ಓರ್ವ ರೋಗಿಯ ತಾಯಿ ಆಶಾದೇವಿ ಎನ್ನುವವರು ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆ ದೃಷ್ಠಿಯಿಂದ ಮಹತ್ವದ ಯೋಜನೆಯಾಗಿದ್ದು, ಸರ್ಕಾರ ಈ ಯೋಜನೆಯನ್ನ ಎಲ್ಲೆಡೆ ವಿಸ್ತರಿಸಬೇಕಿದೆ.