
ಚಿಕ್ಕಬಳ್ಳಾಪುರ(ಕುಣಿತಹಳ್ಳಿ): ಚಿಕ್ಕಬಳ್ಳಾಪುರದ ನಂದಿ ಗಿರಿಧಾಮವು ಜೂನ್ 19 ರಂದು ರಾಜ್ಯ ಸಚಿವ ಸಂಪುಟ ಸಭೆಗೆ ಆತಿಥ್ಯ ವಹಿಸಲು ಸಜ್ಜಾಗುತ್ತಿದೆ. ಸಭೆಗಾಗಿ ಗಿರಿಧಾಮವನ್ನು ಅಲಂಕರಿಸಲಾಗುತ್ತಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು, ಸಚಿವರು ಮತ್ತು ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗಳು ಹೆಚ್ಚಾಗಿವೆ. ಸಾರ್ಕ್ ಸಮ್ಮೇಳನ ನಡೆದಿದ್ದ ವಿಶ್ವ ವಿಖ್ಯಾತ ನಂದಿ ಗಿರಿಧಾಮದಲ್ಲಿ.

j3tvkannada.in
ಕಟ್ಟಡಗಳ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದ್ದು, ಮಧುವಣಗಿತ್ತಿಯಂತೆ ಸಿಂಗರಿಸಲು ಎಲ್ಲಾ ತಯಾರಿಗಳು ನಡೆದಿವೆ. ನಂದಿ ಗಿರಿಧಾಮದಲ್ಲಿ ಹಿಂದೆ ಸಾರ್ಕ್ ಸಮ್ಮೇಳನ ನಡೆದಿತ್ತು. ಎರಡು ಬಾರಿ ಮಹಾತ್ಮ ಗಾಂಧಿಯವರು ಭೇಟಿ ನೀಡಿ ವಿಶ್ರಾಂತಿ ಪಡೆದಿದ್ದರು. ಸಾಕಷ್ಟು ಐತಿಹಾಸಿಕ ಹಿನ್ನೆಲೆ ಇರುವ ನಂದಿ ಗಿರಿಧಾಮದಲ್ಲಿ 2025ನೇ ಸಾಲಿನ 13 ನೇ ಸಭೆಯನ್ನು ನಂದಿ ಗಿರಿಧಾಮದಲ್ಲಿ ಇದೀಗ ನಡೆಸಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ರಾಜ್ಯ ಮಟ್ಟದ ಅಧಿಕಾರಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗುವಂತಹ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಚಿವ ಸಂಪುಟ ಸಭೆ ಮಯೂರ ಸಭಾಂಗಣದಲ್ಲಿ ನಡೆಯುತ್ತಿದ್ದು ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಂಪುಟ ಸಭೆ ನಡೆಯುವ ಸ್ಥಳದಲ್ಲಿ ಸಭಾ ವೇದಿಕೆ, ಪತ್ರಿಕಾಗೋಷ್ಠಿ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ, ನಂದಿ ಗಿರಿಧಾಮದ ಪ್ರವೇಶ ದ್ವಾರದಿಂದ ಮೇಲ್ಭಾಗದ ಸಭಾ ವೇದಿಕೆಯವರೆಗಿನ ರಸ್ತೆಯ ಬದಿಯಲ್ಲಿ ಸ್ವಚ್ಛತೆ ಕೈಗೊಂಡು ಕಸ ವಿಲೇವಾರಿ ಮಾಡುವುದು ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಇತ್ತೀಚೆಗಷ್ಟೇ ಹೊಸದಾಗಿ ರಸ್ತೆ ನಿರ್ಮಾಣವಾಗಿರುವುದರಿಂದ ಸಮಸ್ಯೆಯೇನಿಲ್ಲ. ಆದರೂ ಬೆಟ್ಟದ ಮೇಲಿನ ರಸ್ತೆಗಳಲ್ಲಿ ಏನಾದರೂ ಗುಂಡಿಗಳು ಬಿದ್ದಿದ್ದರೆ ಮುಚ್ಚಲು ಸೂಚನೆ ನೀಡಲಾಗಿದೆ.
ನಂದಿಬೆಟ್ಟ ಬೆಂಗಳೂರಿಗೆ ಸಮೀಪವೇ ಇರುವುದರಿಂದ ಹೆಚ್ಚಿನ ಮಂದಿ ಸಚಿವರು ಬೆಟ್ಟದ ಮೇಲೆ ತಂಗುವುದು ಕಡಿಮೆ. ಆದರೂ ವಸತಿ ನಿಲಯಗಳ ಕೊಠಡಿಗಳ ದುರಸ್ತಿ ಮಾಡಲಾಗುತ್ತಿದೆ. ಅಲ್ಲದೇ ಅಂದು ಯಾವುದೇ ಸಂಚಾರ ದಟ್ಟಣೆಯಾಗದಂತೆ ನಿರ್ವಹಿಸಲು ನಾನಾ ಕ್ರಮ ಕೈಗೊಳ್ಳಲಾಗುತ್ತಿದೆ. ಭದ್ರತೆಗೂ ಈಗಾಗಲೇ ಸೂಚನೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಸುಸೂತ್ರವಾಗಿ ನಡೆಸಲು ಒಟ್ಟು 19 ಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನಂದಿಬೆಟ್ಟದಲ್ಲಿ ಈಗಾಗಲೇ ಸಿದ್ಧತಾ ಕಾರ್ಯಗಳು ಶುರುವಾಗಿವೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ.
ಮತ್ತೊಂದೆಡೆ ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಅಧಿಕಾರಿಗಳ ಜತೆ ನಂದಿಬೆಟ್ಟಕ್ಕೆ ಭೇಟಿ ನೀಡಿ ಸಚಿವ ಸಂಪುಟ ಸಭೆಗೆ ಏನೆಲ್ಲಾ ವ್ಯವಸ್ಥೆಗಳು ಆಗಬೇಕು ಎಂದು ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಸಚಿವ ಸಂಪುಟ ಸಭೆ ನಡೆಯುವ ಮಯೂರ ಸಭಾಂಗಣ ಹೇಗಿರಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾರೆ. ವಸತಿನಿಲಯ, ರಸ್ತೆ ರಿಪೇರಿ ಸೇರಿದಂತೆ ಸಚಿವ ಸಂಪುಟ ಸಭೆಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಸಚಿವ ಸಂಪುಟ ಸಭೆ ನಡೆಯುವ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದೇ ರೀತಿ ನಂದಿ ಗಿರಿಧಾಮದಲ್ಲಿ ನಡೆಯುವ ಸಭೆಯ ಮೇಲೂ ನಾನಾ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿ ಗರಿಗೆದರಿವೆ. ಸದ್ಯ ಸಚಿವ ಸಂಪುಟ ಸಭೆಗೆ ಅಗತ್ಯವಾದ ಎಲ್ಲ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದ್ದು ನಂದಿ ಗಿರಿಧಾಮವನ್ನು ಕಂಗೊಳಿಸುವಂತೆ ಮಾಡುವ ಕಾರ್ಯ ನಡೆಯುತ್ತಿದೆ. ಸಭೆಯಲ್ಲಿ ಭಾಗವಹಿಸುವ ಗಣ್ಯರಿಗೆ ವ್ಯಾಸ್ತವ್ಯ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ.