
ರಾಮನಗರ(ಬಿಡದಿ): ಶೂಟೌಟ್ ಪ್ರಕರಣದಲ್ಲಿ ಗಾಯಗೊಂಡಿದ್ದ ರಿಕ್ಕಿ ರೈ, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಕಾನೂನಿನ ಮೂಲಕವೇ ನ್ಯಾಯ ಪಡೆಯಲು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ. ‘ವೇಂಜೆನ್ಸ್’ ಪದದ ಅರ್ಥವನ್ನು ತಪ್ಪಾಗಿ ಗ್ರಹಿಸಬಾರದೆಂದು ಮನವಿ ಮಾಡಿರುವ ಅವರು, ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಗುಂಡಿನ ದಾಳಿಯಿಂದ ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವುದು ಬೇಡವೆಂದು ಅವರು ಕೋರಿದ್ದಾರೆ.

j3tvkannada.in
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟೌಟ್ ಪ್ರಕರಣದಲ್ಲಿ ಗಾಯಗೊಂಡಿದ್ದು
ಕಾನೂನಿನ ಮೂಲಕವೇ ನ್ಯಾಯ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಗಾಗಿ ವಾಪಸ್ ತೆರಳುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನನಗೆ ನ್ಯಾಯ ಸಿಗಬೇಕು ಇಲ್ಲವಾದರೆ ಕಾನೂನು ಮಾರ್ಗದಲ್ಲಿಯೇ ನ್ಯಾಯ ಹುಡುಕುತ್ತೇನೆಂದು ಹೇಳಿಕೆ ನೀಡಿದ್ದೇನೆ. ನಾನು ‘ವೇಂಜೆನ್ಸ್’ ಎಂಬ ಇಂಗ್ಲಿಷ್ ಪದ ಬಳಕೆ ಮಾಡಿದ್ದೇನೆ. ಇದರರ್ಥ ನ್ಯಾಯಕ್ಕಾಗಿ ಹುಡುಕಾಟ ಎಂದು. ಆದರೆ, ಕೆಲವು ಸುದ್ದಿ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡು ಸೇಡು ಅಥವಾ ಪ್ರತಿಕಾರ (ರಿವೇಂಜ್)ತೀರಿಸಿಕೊಳ್ಳುವುದೆಂದು ಪ್ರಕಟ ಮಾಡಿವೆ. ಇದು ಸರಿಯಲ್ಲ ಎಂದು ಹೇಳಿದರು.
ನಾನು ಹೇಳಿದ ‘ವೇಂಜೆನ್ಸ್’ ಎಂದರೆ ಕಾನೂನು ಮಾರ್ಗದಲ್ಲಿ ನ್ಯಾಯವನ್ನು ಹುಡುಕುತ್ತೇನೆ ಎಂದು ಅರ್ಥ. ಪೊಲೀಸ್ ತನಿಖೆಗೆ ಸಹಕರಿಸುವ ಜತೆಗೆ ನ್ಯಾಯಾಂಗದ ನಿಯಮಾನುಸಾರ ನ್ಯಾಯ ಪಡೆಯಲು ನಾನು ಬದ್ಧನಾಗಿದ್ದೇನೆ. ನನಗೆ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ಹಾಗೂ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಕೂಡ ನಾನು ಗೌರವಿಸುತ್ತೇನೆ. ಕಾನೂನು ಮಾರ್ಗದಲ್ಲಿ ನ್ಯಾಯ ಪಡೆಯುವುದು, ತಪ್ಪಿತಸ್ಥರನ್ನು ಕಾನೂನು ರೀತಿಯಲ್ಲಿಯೇ ಶಿಕ್ಷೆಗೆ ಒಳಪಡಿಸುವುದು ನನ್ನ ಉದ್ದೇಶವಾಗಿದೆ ಎಂದು ರಿಕ್ಕಿ ರೈ ಹೇಳಿದರು.
ಏಪ್ರಿಲ್ 18 ರ ಮಧ್ಯರಾತ್ರಿ ಅನಾಮಿಕ ವ್ಯಕ್ತಿಗಳಿಂದ ಗುಂಡಿನ ದಾಳಿಗೆ ನಾನು ಒಳಗಾಗಿದ್ದು, ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ. ನಾನು ಯಾರನ್ನೂ ಉದ್ದೇಶಿಸಿ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ಸಾರ್ವಜನಿಕರಿಗಾಗಲಿ ಅಥವಾ ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಗೆ ಯಾವುದೇ ಗೊಂದಲವಾಗುವುದು ಬೇಡ. ನನ್ನ ಹೇಳಿಕೆಯನ್ನು ತಿರುಚಿ ಸಾರ್ವಜನಿಕರಿಗೆ ಭಯ ಸೃಷ್ಟಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಮುತ್ತಪ್ಪ ರೈ ಪುತ್ರ ಹೇಳಿದರು. ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ 11.30ರ ವೇಳೆಗೆ ವಿಚಾರಣೆಗೆ ಆಗಮಿಸಿದ ರಿಕ್ಕಿ ರೈ ಅವರನ್ನು ಅಡಿಷನಲ್ ಎಸ್ಪಿ ರಾಮಚಂದ್ರಪ್ಪ, ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಬಿಡದಿ ಠಾಣೆ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಸುಮಾರು 5 ತಾಸುಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.