
ಬೆಂಗಳೂರು: ಆರ್.ಸಿ.ಬಿ ಐ.ಪಿ.ಎಲ್ ವಿಜಯದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರನ್ನು ಅಮಾನತುಗೊಳಿಸಿರುವ ನಡೆಯನ್ನು ಮಾಜಿ ಐ.ಪಿ.ಎಸ್ ಅಧಿಕಾರಿ, ಬಿ.ಜೆ.ಪಿ ನಾಯಕ ಭಾಸ್ಕರ್ ರಾವ್ ಖಂಡಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಈ ಮಟ್ಟಕ್ಕೆ ಅಸಹಾಯಕರಾಗಿ ಹೇಡಿಯಂತೆ ಮತ್ತು ಆತಂಕದಿಂದ ಈವರೆಗೆ ಯಾವ ಮುಖ್ಯ ಮಂತ್ರಿಯೂ ವರ್ತಿಸಿಲ್ಲ ಎಂದು ಟೀಕಿಸಿದ್ದಾರೆ.

j3tvkannada
ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಅಮಾನತು ನಿರ್ಧಾರ ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಭಾಸ್ಕರ್ ರಾವ್ ಬಣ್ಣಿಸಿದ್ದಾರೆ.
ಬೆಂಗಳೂರನ್ನು ಸುರಕ್ಷಿತವಾಗಿ ಇಡುವುದಕ್ಕೆ ಪೊಲೀಸ್ ಆಯುಕ್ತರು ಮತ್ತು ಅವರ ತಂಡ ರಾತ್ರಿ ಇಡೀ ಶ್ರಮಿಸಿದೆ. ಸತ್ಯ ಹೇಳಿದ್ದಕ್ಕೆ ಪೊಲೀಸ್ ಆಯುಕ್ತರಿಗೆ ದೊರೆತ ಬಹುಮಾನ ‘ಅಮಾನತು’ ಆಗಿದೆ ಎಂದು ಭಾಸ್ಕರ್ ರಾವ್ ಕಿಡಿ ಕಾರಿದ್ದಾರೆ. ಅನಿಯಂತ್ರಿತ ಉಪಮುಖ್ಯ ಮಂತ್ರಿಗಳೇ ಈ ಡೆತ್ ಮಾರ್ಚ್ ಅನ್ನು ಆಯೋಜಿಸಿದ್ದಾರೆ ಮತ್ತು ಅವರೇ ಪ್ರಮುಖ ತಪ್ಪಿತಸ್ಥ ಎಂಬುದು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದಿದೆ. ಈವರೆಗೆ ಯಾವೊಬ್ಬ ಮುಖ್ಯಮಂತ್ರಿ ಕೂಡ ಈ ಮಟ್ಟಕ್ಕೆ ಅಸಹಾಯಕರಾಗಿ, ಹೇಡಿಯಂತೆ ಮತ್ತು ಆತಂಕದಿಂದ ವರ್ತಿಸಿಲ್ಲ ಎಂದು ಭಾಸ್ಕರ್ ರಾವ್ ಟೀಕಿಸಿದ್ದಾರೆ.
ಸರ್ಕಾರದ ಕೈಗಳಿಗೆ ರಕ್ತದ ಕಲೆ ಅಂಟಿಕೊಂಡಿದೆ. ಅಷ್ಟೇ ಅಲ್ಲದೆ ಈಗ ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ. ಸರ್ಕಾರವೇ ಈಗ ವಿಪತ್ತಾಗಿ ಪರಿಣಮಿಸಿದೆ ಎಂದು ಭಾಸ್ಕರ ರಾವ್ ಹೇಳಿದ್ದಾರೆ. ಬೆಂಗಳೂರು ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಗುರುವಾರ ರಾತ್ರಿ ನಿರ್ಧಾರ ಪ್ರಕಟಿಸಿತ್ತು. ಅವರ ಜಾಗಕ್ಕೆ ಐ.ಪಿ.ಎಸ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿತ್ತು. ನೂತನ ಆಯುಕ್ತರು ಗುರುವಾರ ರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ.
ಕಾಲ್ತುಳಿತ ಘಟನೆ ಸಂಬಂಧ ಆರ್.ಸಿ.ಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ. ಸಿ.ಸಿ.ಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.