
ದಕ್ಷಿಣ ಕನ್ನಡ (ಮಂಗಳೂರು): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಮತ್ತಷ್ಟು ಜೋರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ದೇರಳಕಟ್ಟೆ ಕಾನಕೆರೆ ನಿವಾಸಿ ಫಾತಿಮ ನಯೀಮ (12) ಮತ್ತು ಮೊಂಟೆಪದವು ನಿವಾಸಿ ಪ್ರೇಮ ಪೂಜಾರಿ (58) ಮೃತಪಟ್ಟವರು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಾಜಕಾಲುವೆ ತುಂಬಿ ಹರಿಯುತ್ತಿದೆ. ಹಲವೆಡೆ ಗುಡ್ಡ ಪ್ರದೇಶ ಕುಸಿತವಾಗಿದೆ. ತೋಟಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

j3tvkannada
ದೇರಳಕಟ್ಟೆ ಕಾನಕೆರೆ ಬಳಿ ನೌಶದ್ ಎಂಬವರ ಮನೆಗೆ ತಡೆಗೋಡೆ ಕುಸಿದು ಫಾತಿಮಾ ನಯೀಮಾ ಮೃತಪಟ್ಟಿದ್ದಾಳೆ. ಮೊಂಟೆಪದವು ಬಳಿ ಗುಡ್ಡ ಕುಸಿದು 5 ಮಂದಿ ಮಣ್ಣಿನಡಿ ಸಿಲುಕಿದ್ದು, ಇವರಲ್ಲಿ ಕಾಂತಪ್ಪ ಪೂಜಾರಿ ಎಂಬವರ ಪತ್ನಿ ಪ್ರೇಮಾ ಪೂಜಾರಿ ಮೃತಪಟ್ಟಿದ್ದಾರೆ. ಕಾಂತಪ್ಪ ಪೂಜಾರಿಗೆ ಗಂಭೀರ ಗಾಯವಾಗಿದೆ. ಒಬ್ಬ ಮಹಿಳೆ ಮತ್ತು ಮೂವರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಎನ್.ಡಿ.ಆರ್ ಎಫ್ ತಂಡ ದೌಡಾಯಿಸಿದೆ. ಬಿರುಸಿನ ಮಳೆ ಮುಂದುವರಿದಿದ್ದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಉಳ್ಳಾಲ, ಜಪ್ಪಿನಮೊಗರು, ಕೊಟ್ಟಾರಚೌಕಿ, ಮಾಲೆಮಾರ್ ಆನೆಗುಂಡಿ ಪ್ರದೇಶಗಳು ಜಲಾವೃತವಾಗಿದೆ. ಬೋಟಿನಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು ರಾತೋರಾತ್ರಿ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.