
ಯಾದಗಿರಿ: ರಾಜ್ಯಾದ್ಯಂತ ಮಕ್ಕಳು ಇಂದಿನಿಂದ ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಆದರೆ, ಕನ್ನಡ ಶಾಲೆಗಳ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಅನ್ನೋದಕ್ಕೆ ಈ ಶಾಲೆ ಸಾಕ್ಷಿಯಾಗಿದೆ. ಸಚಿವ ಶರಣಬಸಪ್ಪ ದರ್ಶನಾಪುರ ಅವರ ಊರಿನ ಶಾಲೆಗಳಿಗೇ ಈ ರೀತಿಯ ಗತಿಯಾದ್ರೆ, ಇನ್ನು ಕುಗ್ರಾಮದಲ್ಲಿರುವ ಶಾಲೆಗಳ ಸ್ಥಿತಿ ಕೇಳೋದೇ ಬೇಡ.

j3tvkannada
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದರಿಯಾಪೂರ ಗ್ರಾಮದಲ್ಲಿರುವ ಕನ್ನಡ ಶಾಲೆ ನಿಜಕ್ಕೂ ಶಾಲೆಯೇ ಅಲ್ಲ ಅಕ್ಷರಶಃ ಹಂದಿಗೂಡು. ಅಂಥ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಬರುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ದರಿಯಾಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಸುರಕ್ಷತೆ ಮತ್ತು ನೈರ್ಮಲ್ಯ ಸ್ಥಿತಿಯನ್ನು ಕಾಯ್ದುಕೊಳ್ಳದ ಕಾರಣ ಗುರುವಾರ ಶಾಲೆ ತೆರೆಯುವ ಮೊದಲ ದಿನದಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ಬುಧವಾರ ಯಾದಗಿರಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಗುರುವಾರ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾದರು. ಮಳೆ ನೀರು ಹಾಗೂ ಚರಂಡಿ ನೀರು ಸೀದಾ ಶಾಲೆಯ ಅವರಣಕ್ಕೆ ನುಗ್ಗಿತ್ತು.
ಇಂದು ಬೆಳಿಗ್ಗೆ ಶಾಲೆಗೆ ತೆರಳಿದ ವಿದ್ಯಾರ್ಥಿಗಳು ನೀರು ನೋಡಿ ಆಘಾತಪಟ್ಟಿದ್ದಾರೆ. ಚರಂಡಿ ನೀರಿನಿಂದ ಜಲಾವೃತಗೊಂಡ ಆವರಣದಲ್ಲೇ ವಿದ್ಯಾರ್ಥಿಗಳು ಓಡಾಟ ಮಾಡಿದ್ದಾರೆ.
ಡ್ರೈನೇಜ್ ತುಂಬಿ ಶಾಲಾ ಆವರಣಕ್ಕೆ ಒಳಚರಂಡಿ ನೀರು ನುಗ್ಗಿದ್ದರೆ, ಮೊಣಕಾಲುದ್ದ ನೀರಲ್ಲೇ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಡ್ರೈನೇಜ್ ನಲ್ಲಿ ನೀರು ಪಾಸ್ ಆಗದೇ ಶಾಲೆಗೆ ನೀರು ನುಗ್ಗಿದೆ. ಡ್ರೈನೇಜ್ ಕ್ಲೀನ್ ಮಾಡದೇ ನಿರ್ಲಕ್ಷ್ಯ ವಹಿಸಿರುವ ಆಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಇಲ್ಲಿನ ಶಾಲೆ ಮಾತ್ರವಲ್ಲ ಇಡೀ ಯಾದಗಿರಿ ಜಿಲ್ಲೆಯ ಪರಿಸ್ಥಿತಿಯೇ ಹೀಗಾಗಿದೆ. ಮಳೆಗೆ ಶಹಾಪುರ ನಗರ ಕೆರೆಯಂತಾಗಿದೆ. ಶಹಾಪುರ ನಗರದ ಹಲವು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ನಗರದ ಬಸವೇಶ್ವರ ವೃತ್ತದಲ್ಲಿ ಮಳೆ ನೀರು ತುಂಬಿದೆ. ಮಳೆ ನೀರಿನಲ್ಲಿ ಸಂಚಾರ ಮಾಡಲು ವಾಹನ ಸವಾರರು ಪರದಾಟ ಮಾಡಿದ್ದು, ಬಸವೇಶ್ವರ ವೃತ್ತದಲ್ಲಿ ಹಲವು ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ.ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪುರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.