
ಚಿಕ್ಕಮಗಳೂರು: ರಾಜ್ಯದಾದ್ಯಂತ ಮಳೆ ಸುರಿಯುತ್ತಿದೆ ಮತ್ತು ಹವಾಮಾನ ಇಲಾಖೆ ಆಯಾ ಜಿಲ್ಲೆಗಳಲ್ಲಿ ಮಳೆ ಸುರಿಯುವ ಪ್ರಮಾಣಕ್ಕೆ ಅನುಗುಣವಾಗಿ ರೆಡ್, ಆರೇಂಜ್ ಮತ್ತು ಯೆಲ್ಲೋ ಅಲರ್ಟ್ಗಳನ್ನು ಘೋಷಿಸಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆ ಹೇಗೆ ಸುರಿಯುತ್ತದೆ ಅಂತ ಕನ್ನಡಿಗರಿಗೆ ಗೊತ್ತೇ ಇರುತ್ತದೆ.

j3tvkannada.in
ಅದರೆ, ಈ ರಸ್ತೆಯ ಮೂಲಕ ಹಾದು ಹೋಗುವ ಪ್ರವಾಸಿಗರಿಗೆ ತಮ್ಮ ಹುಚ್ಚಾಟ ಪ್ರದರ್ಶಿಸಲು ಚಾರ್ಮಾಡಿ ಘಾಟ್ ಪ್ರದೇಶವೇ ಅಗಬೇಕು. ಇಲ್ಲಿ ನಾಲ್ಕು ಜನ ಸುರಿಯುತ್ತಿರುವ ಮಳೆಯಲ್ಲಿ ಜಾರುವ ಬಂಡೆಗಳ ಮೇಲೆ ಹತ್ತುವ ಇಳಿಯುವ ಸಾಹಸ ಮಾಡುತ್ತಿದ್ದಾರೆ. ಪಕ್ಕದಲ್ಲಿ ಕಲ್ಲುಬಂಡೆಗಳ ಮೂಲಕ ನೀರು ಜಲಪಾತದಂತೆ ಬೀಳುತ್ತಿದೆ. ಕಾಲು ಜಾರಿದರೆ ಏನಾದೀತು ಅಂತ ಹೇಳುವ ಅವಶ್ಯಕತೆಯಿಲ್ಲ, ಆದರೆ ಮತಿಹೀನ ಪ್ರವಾಸಿಗರಿಗೆ ಹೇಳೋರು ಕೇಳೋರು ಯಾರು?
ಕರ್ನಾಟಕದಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಅದರಲ್ಲಿಯೂ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ವರ್ಷಧಾರೆ ಜೋರಾಗಿದೆ. ಇದರ ಬೆನ್ನಲ್ಲೇ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತಗಳು ಸಂಭವಿಸಿವೆ. ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಜಾಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ನಲ್ಲಿ ಕಳೆದ ವರ್ಷ ಕುಸಿದ ಜಾಗದಲ್ಲೇ ಮತ್ತೆ ಮಣ್ಣು ಕುಸಿಯುತ್ತಿದೆ. ಆದರೆ, ಅಧಿಕಾರಿಗಳು ಮಣ್ಣು ಕುಸಿಯುತ್ತಿರುವ ಜಾಗವನ್ನು ಪ್ಲಾಸ್ಟಿಕ್ನಿಂದ ಮುಚ್ಚಿದ್ದಾರೆ. ಆದರೆ, ತಡೆಗೋಡೆ ಕೂಡಾ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ಮಳೆಗಾಲದ ಹೊತ್ತಿಗೆ ಕಾಮಗಾರಿ ಮುಗಿಸುವಂತೆ ಜಿಯಾಲಜಿಕಲ್ ಸರ್ವೇ ವಿಜ್ಞಾನಿಗಳು ಹೇಳಿದ್ದರು. ಆದರೆ, ಮಳೆ ಆರಂಭವಾದರೂ ಇನ್ನೂ ಕೂಡಾ ಕೆಲಸ ಮುಗಿದಿಲ್ಲ. ಇದರಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ.
ಶಿರಾಡಿ ಘಾಟಿಯಲ್ಲೂ ಭೂಕುಸಿತವಾಗಿದ್ದು ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಭಾರಿ ಮಳೆಯಿಂದ ಶಿರಾಡಿ ಘಾಟ್ನ ಹಲವೆಡೆ ಭೂಕುಸಿತದ ಭೀತಿ ಕೂಡಾ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ಗುಡ್ಡ ಕಡಿದಿರುವ ಕಾರಣ ಮತ್ತೆ ಮಣ್ಣು ಕುಸಿಯುವ ಆತಂಕ ಮೂಡಿದೆ. ಆನೆಮಹಲ್ ಬಳಿಯೂ ಭಾರೀ ಪ್ರಮಾಣದ ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಕುಸಿಯುತ್ತಿದೆ. ಆತಂಕದಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಶಿರಾಡಿ ಘಾಟ್ ಮಾತ್ರವಲ್ಲ ಸಕಲೇಶಪುರದ ಹಲವೆಡೆ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ. ಮನೆಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ. ಮಳೆ ಅವಾಂತರದ ಪ್ರಯುಕ್ತ ಸಕಲೇಶಪುರ ಭಾಗದ ಶಿರಾಡಿ ಘಾಟ್ಗೆ ಸಂಸದ ಶ್ರೇಯಸ್ ಪಟೇಲ್ ಸೋಮವಾರ ಭೇಟಿ ನೀಡಿದ್ದಾರೆ. ಇಂದು ವಿಪಕ್ಷ ನಾಯಕ ಆರ್.ಅಶೋಕ್ ಬೇಟಿ ನೀಡಲಿದ್ದಾರೆ.