
ಮಂಗಳೂರು: ಮುಂಗಾರು ಈ ವಾರದಲ್ಲಿ ಕರಾವಳಿಯ ಮೂಲಕ ರಾಜ್ಯ ಪ್ರವೇಶಿಸುವುದು ಖಚಿತವಾಗಿದ್ದು, ಇದಕ್ಕೆ ಬಹುಮುಖ್ಯವಾದ ಕಾರಣ ಈಗಾಗಲೇ ಎದ್ದಿರುವ ಚಂಡಮಾರುತ ಮುಂಗಾರು ಮಾರುತವನ್ನು ಚುರುಕುಗೊಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಳ್ಳಬೇಕಾದ ಶಕ್ತಿ ಚಂಡಮಾರುತದ ಪ್ರಭಾವ ತಣ್ಣಗಾಗಿದೆ. ಇದರ ಪರಿಣಾಮ ಈ ತಿಂಗಳಾಂತ್ಯದ ವರೆಗೂ ಎಲ್ಲೆಡೆ ಉತ್ತಮ ಮಳೆಯಾಗಲಿದೆ. ಪ್ರತಿ ವರ್ಷವೂ ಮುಂಗಾರು ಆಗಮನದ ಬಗ್ಗೆ ಖಚಿತವಾಗಿ ಹೇಳುವುದು ಬಹಳ ಕಷ್ಟಕರವಾಗಿತ್ತು.

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ) ಒಂದು ದಿನ ನಿಗದಿ ಮಾಡಿದರೆ ಮುಂಗಾರು ಒಂದೆರಡು ದಿನ ಮುಂದಕ್ಕೆ ಅಥವಾ ಒಂದೆರಡು ದಿನ ಹಿಂದಕ್ಕೆ ಪ್ರವೇಶ ಮಾಡುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಮೇ 23ರಂದು ಮುಂಗಾರು ಕರಾವಳಿ ಭಾಗದ ಕಡೆಗೆ ಪ್ರವೇಶ ಪಡೆಯಲಿದ್ದು ಬಳಿಕ ರಾಜ್ಯದೊಳಗೆ ಪ್ರವೇಶದ ಛಾಯೆಯನ್ನು ತೋರಿಸಲಿದೆ ಎನ್ನುವುದು ಐ.ಎಂ.ಡಿ ವಿಜ್ಞಾನಿಗಳ ಅಭಿಪ್ರಾಯ.
2009ರಲ್ಲಿ ಮುಂಗಾರು ಇದೇ ರೀತಿ ಅಕಾಲಿಕವಾಗಿ ರಾಜ್ಯಕ್ಕೆ ಪ್ರವೇಶ ಮಾಡಿತ್ತು. ಬಳಿಕ ಇದೇ ಮೊದಲ ಬಾರಿಗೆ ಈ ವರ್ಷ ಮೇ 23ರ ಅಸುಪಾಸಿನಲ್ಲಿ ಮುಂಗಾರು ಪ್ರವೇಶ ಪಡೆಯಲಿದೆ. ಇದರ ಪ್ರಕಾರ ಪ್ರತಿ ವರ್ಷದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಒಂದು ವಾರ ಮೊದಲೇ ಮುಂಗಾರು ಪ್ರವೇಶಿಸಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಕ್ಷೀಣಿಸಿದ ಪರಿಣಾಮ ಮುಂಗಾರು ಮಾರುತಗಳು ಚುರುಕುಗೊಳ್ಳಲು ಮೂಲ ಕಾರಣ ಎನ್ನುವುದು ಐ.ಎಂ.ಡಿ.ಯ ವಿಜ್ಞಾನಿಗಳ ಅಭಿಪ್ರಾಯ.
ಮುಂಗಾರು ಅಕಾಲಿಕ ಪ್ರವೇಶವು ಕೆಲವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಬೇಗನೆ ಮಳೆ ಆರಂಭವಾದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಲಿದೆ. ಆದರೆ ಮಳೆಯ ತೀವ್ರತೆ ಮತ್ತು ವಿತರಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಕಾಲಿಕ ಮಳೆ ಕೆಲವೊಮ್ಮೆ ಪ್ರವಾಹದಂತಹ ಪರಿಸ್ಥಿತಿ ತಂದೊಡ್ಡಬಹುದು ಎನ್ನುತ್ತಾರೆ ಐ.ಎಂ.ಡಿ ವಿಜ್ಞಾನಿ ಸೆಲ್ವಮಣಿ. ಮುಂಗಾರು ಬೇಗನೆ ಬರುವುದು ವಿಶೇಷ ಬೆಳವಣಿಗೆ. ಆದರೆ ಜೂನ್ ಮೊದಲ ವಾರದಲ್ಲಿ ಮಳೆಯ ವೇಗ ಸ್ವಲ್ಪ ತಗ್ಗುವ ಸಾಧ್ಯತೆಯಿದ್ದು, ಜೂನ್ ಮಧ್ಯಭಾಗದಿಂದ ಮಳೆ ಮತ್ತೆ ಹಿಡಿತ ಕಾಯ್ದುಕೊಂಡು ಹೋಗಬಹುದು. ಮುಖ್ಯವಾಗಿ ಬಂಗಾಳ ಕೊಲ್ಲಿಯಲ್ಲಿ ಶಕ್ತಿ ಚಂಡಮಾರುತ ಸಂಪೂರ್ಣ ಮರೆಯಾಗಿದೆ. ಇದೆಲ್ಲವೂ ಮುಂಗಾರು ಆಗಮನಕ್ಕೆ ಹಾದಿ ಸುಗಮವಾಗಿಸಿದೆ ಎಂದಿದ್ದಾರೆ ಸಾಯಿಶೇಖರ್.