
ಮೈಸೂರು: ಭಾರತ ಪಾಕಿಸ್ತಾನದ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ನಡುವೆ ಆರೋಪ ಪ್ರತ್ಯಾರೋಪ ಶುರುವಾಗಿದೆ. ಬಿ.ಜೆ.ಪಿ ತ್ರಿರಂಗ ಯಾತ್ರೆ ಮಾಡುವುದು ಬೇಡ, ಬದಲಾಗಿ ಡೊನಾಲ್ಡ್ ಟ್ರಂಪ್ ಪರವಾದ ಯಾತ್ರೆ ಮಾಡಲಿ ಎಂದು ಸಲಹೆ ನೀಡಿದ್ದರು. ಇದೀಗ ಇದಕ್ಕೆ ಬಿ.ಜೆ.ಪಿ.ಯ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

j3tvkannada
ಪಾಕಿಸ್ತಾನದ ಮೇಲೆ ಬಗ್ಗು ಬಡಿಯುವಂತಹ ಹಂತಕ್ಕೆ ಬಂದ ನಂತರ ದೇಶವೇ ಭಾರತ ಸೇನೆ, ಆಪರೇಷನ್ ಸಿಂಧೂರ್ ಬಗ್ಗೆ ಹಾಡಿ ಹೊಗಳುತ್ತಿದೆ. ಆದರೆ, ಕಾಂಗ್ರೆಸ್ಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇಲ್ಲ ಸಲ್ಲದ ಆರೋಪಗಳನ್ನು ಪ್ರಧಾನಿ ಮೇಲೆ ಮಾಡುತ್ತಾರೆ. ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆಯ ತರಹ ಕಾಕಾ ಕಾಕಾ ಅಂತಾ ಮಾತನಾಡುತ್ತಾರೆ.
ಅಬ್ಜುಲ್ ಖಾನ್ ರೀತಿಯ ಸಂತೋಷ್ ಲಾಡ್ ಮಾತು ಪ್ರಧಾನಿ ಮೋದಿ ಬಗ್ಗೆ ಮಾತನಾಡದೇ ಇದ್ದರೆ ಲಾಡ್ ಗೆ ತಿಂದಿದ್ದು ಅರಗುವುದಿಲ್ಲ. ನೀವು ಏನು ಮಾತನಾಡುತ್ತಿದ್ದೀರಿ ಎನ್ನುವ ಜ್ಞಾನ ನಿಮಗೆ ಇದೆಯಾ. ಮರಾಠ ಸಮುದಾಯದ ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ರೀತಿಯ ಮಾತು ಬರುತ್ತಿಲ್ಲ. ಅಬ್ಜುಲ್ ಖಾನ್ ರೀತಿಯ ಮಾತು ಬರುತ್ತಿದೆ. ನೀವೇನು ಬಹಳ ಮೇಧಾವಿನಾ. ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ಮೋದಿಗೆ ಹೇಳಿ ಕೊಡುವಷ್ಟು ನೀವು ಬುದ್ದಿವಂತರಾ ಎಂದು ವಾಗ್ದಾಳಿ ನಡೆಸಿದರು.
1971ರಲ್ಲಿ ಇಂದಿರಾಗಾಂಧಿ ಏನು ಕಡಿದು ಕಟ್ಟೆ ಹಾಕಿದ್ರು:-
ಅವತ್ತಿನ ಯುದ್ದದ ಗೆಲುವನ್ನು ಹಾಳು ಮಾಡಿದ್ದು ನಿಮ್ಮ ಇಂದಿರಾಗಾಂಧಿ, ಅದು ನೆನಪಿರಲಿ. ಕನಿಷ್ಠ ಪರಿಜ್ಞಾನ ಇಟ್ಟುಕೊಂಡು ಮಾತನಾಡಿ. ಪಹಲ್ಗಾಮ್ನಿಂದ ಕನ್ನಡಿಗರನ್ನು ಕರೆದುಕೊಂಡು ಬರಲು ಅವಕಾಶ ಮಾಡಿಕೊಟ್ಟಿದ್ದು ಮೋದಿ. ಅದರಲ್ಲಿ ನಿಮ್ಮ ಸಾಧನೆ ಏನಿದೆ. ನಿಮ್ಮ ಅನಿಷ್ಟಕ್ಕೆಲ್ಲಾ ಮೋದಿಯೇ ಕಾರಣ ಎನ್ನುವ ರೀತಿ ಯಾಕೆ ಮಾತನಾಡಿತ್ತಿದ್ದೀರಿ. ಪಾಕಿಸ್ತಾನ ಮಾತ್ರ ಅಲ್ಲ. ನಮ್ಮ ಜೊತೆಯಲ್ಲೇ ಇಂತಹ ಹಿತಶತ್ರು ಗಳು ಟೈಂ ಬಾಂಬ್ ತರಹ ಇದ್ದಾರೆ ಎಂದು ಸಿಡಿಮಿಡಿಗೊಂಡಿದ್ದಾರೆ.
ಲಾಡ್ ಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ:-
ಹೊರಗಡೆ ಮಾತ್ರ ತಾನು ಬಹಳ ಸಾಚಾ ಎನ್ನುವ ರೀತಿ ಪೋಸ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕರ ಕಿಟ್ ಹಗರಣದಿಂದ ಬಚಾವ್ ಆದರು. ಇಲ್ಲದಿದ್ದರೆ ಎರಡನೇ ಬಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ದುಡ್ಡಿನ ಕೊಬ್ಬಿನಿಂದ ಸಂತೋಷ್ ಲಾಡ್ ಮಾತನಾಡುತ್ತಿದ್ದಾರೆ. ನಿಮಗೆ ದುಡ್ಡು ಇರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ, ನೆನಪಿಟ್ಟುಕೊಳ್ಳಿ ಎಂದು ಹೇಳಿದರು.
ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿಗಳನ್ನು ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಕಾಂಗ್ರೆಸ್ ಗೆ ಪಾಕಿಸ್ತಾನದ ಮೇಲೆ ಸದಾ ಪ್ರೀತಿ. ಕಾಂಗ್ರೆಸ್ ಪಾಕಿಸ್ತಾನದ ಪಿತಾಮಹ, ಅದಕ್ಕೆ ಪಾಕಿಸ್ಥಾನದ ಮೇಲೆ ಅತಿಯಾದ ಪ್ರೀತಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.