
ಮಂಡ್ಯ : ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ನಿಭಾಯಿಸುವ ಆಶಯದೊಂದಿಗೆ ದೇಶಾದ್ಯಂತ ನಡೆಸುತ್ತಿರುವ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಕೆ.ಆರ್.ಎಸ್ ಜಲಾಶಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೇ 11 ರಂದು ನಡೆಯುವ ಈ ಮಾಕ್ ಡ್ರಿಲ್ ಮೂಲಕ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಜನರು ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬುವ ಪ್ರಯತ್ನ ನಡೆಯಲಿದೆ.

j3tvkannada
ಆಪರೇಷನ್ ಅಭ್ಯಾಸ್ ಮಾಕ್ ಡ್ರಿಲ್ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈಗಾಗಲೇ ಮಂಡ್ಯದಲ್ಲಿ ಒಮ್ಮೆ ನಾನಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದರು. ಜತೆಗೆ, ನಗರದ ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಕ್ ಡ್ರಿಲ್ಗೆ ಸಜ್ಜುಗೊಳಿಸಿದರು.
ಇದಕ್ಕಾಗಿ ಕೆ.ಆರ್.ಎಸ್ನ ಬೃಂದಾವನ ಗಾರ್ಡನ್, ದೋಣಿವಿಹಾರ ಕೇಂದ್ರ, ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಅಣಕು ಕಾರ್ಯಾಚರಣೆಗೆ ತಯಾರಿ ನಡೆಸಲಾಗಿದೆ. ಇದರೊಂದಿಗೆ ಮಯೂರ ಹೋಟೆಲ್, ಪಾರ್ಕಿಂಗ್ ಸ್ಥಳದಲ್ಲೂ ಮಾಕ್ ಡ್ರಿಲ್ ನಡೆಯುವ ಸಾಧ್ಯತೆಯಿದೆ. ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸರೊಂದಿಗೆ ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ವೈದ್ಯಕಿಯೇತರ ಸಿಬ್ಬಂದಿ, ಅಗ್ನಿಶಾಮಕದಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಲಿದ್ದಾರೆ. ಜತೆಗೆ, ಗೃಹರಕ್ಷಕ ದಳ, ಎನ್.ಸಿ.ಸಿ ಕೆಡೆಟ್ಗಳು, ಎನ್.ಎಸ್.ಎಸ್ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಇವರೆಲ್ಲರೂ ತಮ್ಮ ತಮ್ಮ ವ್ಯಾಪ್ತಿಯ ಕಾರ್ಯ ಚಟುವಟಿಕೆಗಳನ್ನು ಅಣಕು ಕಾರ್ಯಾಚರಣೆ ವೇಳೆ ನಿಭಾಯಿಸಲಿದ್ದಾರೆ.
ಬೋಟಿಂಗ್ ಸ್ಥಳದಲ್ಲಿ ಜಲಾಘಾತದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗಿರಲಿದೆ ಜನರನ್ನು ಹೇಗೆ ರಕ್ಷಿಸಲಾಗುತ್ತದೆ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಬೋಟ್ ರೆಸ್ಕೂ್ಯ ಅಣಕು ಕಾರ್ಯಾಚರಣೆಯ ಪ್ರದರ್ಶನ ನಡೆಯಲಿದೆ. ಏರ್ಸ್ಟ್ರೈಕ್ ವೇಳೆ ಬಾಂಬ್, ಮಿಸೈಲ್ ದಾಳಿ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ನಡೆಯುವ ರಕ್ಷಣಾ ಕಾರ್ಯಾಚರಣೆ ವಿಧಾನವೂ ಹೋಟೆಲ್ಗಳು ಮತ್ತು ಪಾರ್ಕ್ನಲ್ಲಿ ಪ್ರದರ್ಶನಗೊಳ್ಳಲಿದೆ. ಇದಷ್ಟೂ ಅಣಕು ಪ್ರದರ್ಶನವು ಮೇ 11ರಂದು ಸಂಜೆ 4ರಿಂದ ರಾತ್ರಿ 7ರವರೆಗೆ ನಡೆಯಲಿದೆ.
ಪೊಲೀಸರ ಕಾರ್ಯಾಚರಣೆ:-
ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನದಲ್ಲಿ ಪೊಲೀಸರದ್ದೇ ಪ್ರಮುಖ ಜವಾಬ್ದಾರಿ. ತುರ್ತು ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಿಕೆ, ಕ್ರೌಡ್ ಕಂಟ್ರೋಲ್ ಟ್ರಾಫಿಕ್ ನಿರ್ವಹಣೆ, ನಾನಾ ಸ್ಥಳಗಳಲ್ಲಿ ಅಡಗಿರುವ ಉಗ್ರರು/ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ, ಚೆಕ್ಪೋಸ್ಟ್ ನಿರ್ಮಿಸಿ ಅಲ್ಲಿ ವಾಹನಗಳ ಮಾನಿಟರಿಂಗ್ ಮಾಡುವಿಕೆ ಹೀಗೆ ನಾನಾ ಜವಾಬ್ದಾರಿಗಳನ್ನು ಪೊಲೀಸರು ನಿರ್ವಹಣೆ ಮಾಡಲಿದ್ದಾರೆ.
ಉಳಿದಂತೆ ಅಗ್ನಿಶಾಮಕ ಸಿಬ್ಬಂದಿ, ಗೃಹರಕ್ಷಕ ದಳ ಸಿಬ್ಬಂದಿಯಿಂದ ಜನರ ರಕ್ಷಣಾ ಕಾರ್ಯಾಚರಣೆ ವಿಧಾನಗಳ ಪ್ರದರ್ಶನ ನಡೆಯಲಿದೆ. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯು ಗಾಯಾಳುಗಳಿಗೆ ಚಿಕಿತ್ಸೆ ನೀಡಿ, ಸುಶ್ರೂಷೆ ಮಾಡುವ ಮಾಕ್ ಡ್ರಿಲ್ ನಡೆಯಲಿದೆ. ಆ್ಯಂಬುಲೆನ್ಸ್ಗಳನ್ನೂ ಕೂಡ ಮಾಕ್ ಡ್ರಿಲ್ಗೆ ಬಳಸಿಕೊಳ್ಳಲಾಗುತ್ತಿದೆ.
ಕೇಂದ್ರ, ರಾಜ್ಯ ಸರಕಾರದ ನಿರ್ದೇಶನದಂತೆ ಕೆ.ಆರ್.ಎಸ್ ಅಣೆಕಟ್ಟೆ ಬಳಿ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನಕ್ಕೆ ತಯಾರಿ ನಡೆಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳ ಆತ್ಮವಿಶ್ವಾಸ ವೃದ್ಧಿಸಲು, ಜನರಲ್ಲಿ ವಿಶ್ವಾಸ ಮತ್ತು ಅರಿವು ಮೂಡಿಸುವ ಪ್ರಯತ್ನ ಇದಾಗಿದೆ.
ಮಾಕ್ ಡ್ರಿಲ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ನಾಗರಿಕರ ರಕ್ಷಣೆ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ, ಏರ್ಸ್ಟೆ್ರೖಕ್, ಬ್ಲಾಕ್ಔಟ್ ಚಟುವಟಿಕೆಗಳ ಅಣಕು ಕಾರ್ಯಚರಣೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಹೇಗೆ ಅಲರ್ಟ್ ಆಗಿರುತ್ತಾರೆ ಎಂಬುದು ಮಾಕ್ ಡ್ರಿಲ್ನಲ್ಲಿ ಪ್ರತಿಂಬಿಸಲಿದೆ.