
ಬಾಗಲಕೋಟೆ(ರಬಕವಿ-ಬನಹಟ್ಟಿ):ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರಿಂದ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ, ಸಿಂಧೂರ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆ ಈಗ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ.

j3tvkannada.in
ಜತೆಗೆ ಜವಳಿ ಉದ್ಯಮದಲ್ಲಿ ಅದರಲ್ಲೂ ಸೀರೆ ತಯಾರಿಕೆಯಲ್ಲಿ ಸಿಂಧೂರ ಹೆಸರಿನಲ್ಲಿ ಸೀರೆಗಳು ಮಾರುಕಟ್ಟೆಗೆ ಹೊಸ ಉತ್ಸಾಹದೊಂದಿಗೆ ಹೆಜ್ಜೆ ಇಡುತ್ತಿದ್ದು, ಈಗ ಭಾರೀ ಬೇಡಿಕೆಯಾಗಿ ಪರಿಣಮಿಸಿದೆ. ಮೊದಲೇ ಮಾರುಕಟ್ಟೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಜವಳಿ ಉದ್ಯಮಕ್ಕೆ ಇದೀಗ ಸಿಂಧೂರ ಹೆಸರಿನ ಸೀರೆಗಳು ಹೊಸ ಉತ್ಸಾಹದೊಡನೆ ಮಾರುಕಟ್ಟೆಗೆ ಬಂದಿವೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಅವಳಿ ನಗರಗಳು ಜವಳಿ ಉದ್ಯಮಕ್ಕೆ ಬಹಳ ಹೆಸರುವಾಸಿ. ಆದರೆ ಕಳೆದ 6-7 ವರ್ಷಗಳಿಂದ ನೂಲು, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸರ್ಕಾರಗಳ ನಿರಾಸಕ್ತಿ, ಕಡಿಮೆ ದರದಲ್ಲಿ ಅನ್ಯ ರಾಜ್ಯಗಳ ಸೀರೆಗಳ ದಾಂಗುಡಿಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಜವಳಿ ಕ್ಷೇತ್ರ ಜೀವಂತ ಶವದಂತಿತ್ತು.
ಆದರೀಗ ಪಾಕ್ ಕುಕೃತ್ಯಕ್ಕೆ ಪ್ರತಿಯಾಗಿ ಆರಂಭಗೊಂಡ ಸಿಂಧೂರ ಕಾರ್ಯಾಚರಣೆ ಸಮರವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನೇಕಾರರು ಸಿಂಧೂರ ಹೆಸರಿನಡಿ ಉತ್ತಮ ವಿನ್ಯಾಸ, ಗುಣಮಟ್ಟದ ಸೀರೆಗಳ ನೇಯ್ಗೆಗೆ ಮುಂದಾಗಿವೆ. ಜತೆಗೆ ಈ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿರುವುದು ಬಸವಳಿದಿದ್ದ ನೇಕಾರರಿಗೆ ಜೀವಕಳೆ ಬಂದಂತಾಗಿದೆ.
ಕೇವಲ ಎರಡೇ ದಿನಗಳಲ್ಲಿ ಕುಂಕುಮ ಬಣ್ಣದ ಸೀರೆಗಳು ಹತ್ತಾರು ವಿನ್ಯಾಸಗಳೊಡನೆ ವಿವಿಧ ನಕ್ಷೆಗಳಡಿ ಸಿಂಧೂರ ಹೆಸರಲ್ಲಿ ಉತ್ಪಾದನೆಗೆ ಸಜ್ಜಾಗಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಮಾರುಕಟ್ಟೆಗೆ ಲಗ್ಗೆಯಿಡಲು ತವಕದಲ್ಲಿವೆ. ₹600 ರಿಂದ ₹800 ಮೌಲ್ಯದ ಉತ್ಕೃಷ್ಠ ಗುಣಮಟ್ಟ ಮತ್ತು ವಿವಿಧ ವಿನ್ಯಾಸಗಳ ಸೀರೆಗಳು ಮಾರುಕಟ್ಟೆಯಲ್ಲಿ ಮಹಿಳೆಯರ ಮನ ಗೆದ್ದಿದ್ದು, ಸೀರೆಗಳಿಗೆ ಬೇಡಿಕೆ ಹೆಚ್ಚಿಸಿದೆ. ಹತ್ತಾರು ವಿನ್ಯಾಸಗಳಲ್ಲಿ ಸೀರೆಗಳು ಲಭ್ಯವಿವೆ. ಈ ಸೀರೆಗಳು ಇದೀಗ ದೇಶಾಭಿಮಾನದ ಪ್ರತೀಕವಾಗಿವೆ.