
ಬಳ್ಳಾರಿ: ಮಾಜಿ ಸಚಿವ ಮತ್ತು ಗಂಗಾವತಿ ಶಾಸಕರಾಗಿದ್ದ ಗಾಲಿ ಜನಾರ್ಧನ ರೆಡ್ಡಿಯವರು ಕಳೆದ 14 ವರ್ಷಗಳಿಂದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾನೂನೂ ಹೋರಾಟಗಳನ್ನು ಎದುರಿಸುತ್ತಲೇ ಇದ್ದರು. ಮೇ 6ರಂದು ಗಾಲಿ ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಹೈದ್ರಾಬಾದ್ ನಾಂಪಲ್ಲಿ ಸಿ.ಬಿ.ಐ ಕೋರ್ಟ್ ತೀರ್ಪು ನೀಡಿದ್ದು, 7 ವರ್ಷ ಜೈಲು ಶಿಕ್ಷೆಯನ್ನು ಕೂಡಾ ವಿಧಿಸಿತ್ತು. ಇನ್ನು ಈ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತ್ರವಲ್ಲದೆ, ಇನ್ನೂ ಹಲವರು ಪಾಲ್ಗೊಂಡಿದ್ದರು ಎಂದು ವರದಿಯಾಗಿತ್ತು. ಇದೀಗ ಜೈಲು ಹಕ್ಕಿಯಾಗಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ಶಾಕ್ ಎದುರಾಗಿದೆ.

j3tvkannada
ಜನಾರ್ದನ ರೆಡ್ಡಿ ಅಕ್ರಮ ಗಣಿಕಾರಿಕೆ ನಡೆಸಿದ್ದು ಬಯಲಾಗುತ್ತಿದ್ದಂತೆ, ಶಾಸಕ ಸ್ಥಾನ ಏನಾಗುತ್ತೆ ಅನ್ನೋ ಪ್ರಶ್ನೆ ಎಲ್ಲರಿಗೂ ಮೂಡಿತ್ತು. ಇದೀಗ ಜನಾರ್ದನ ರೆಡ್ಡಿಯವರ ಶಾಸಕ ಸ್ಥಾನವನ್ನು ಅನರ್ಹತೆಗೊಳಿಸಿ ಆದೇಶ ಹೊರಡಿಸಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿ.ಬಿ.ಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ, ಅವರನ್ನು ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ಜನಾರ್ದನ ರೆಡ್ಡಿ ಅವರ ರಾಜಕೀಯ ಭವಿಷ್ಯಕ್ಕೆ ಭಾರೀ ಹಿನ್ನಡೆಯಾಗಿದೆ. ವಿಧಾನಸಭೆ ಕಾರ್ಯದರ್ಶಿಯವರ ಆದೇಶದ ಪ್ರಕಾರ, ಗಾಲಿ ಜನಾರ್ದನ ರೆಡ್ಡಿ ಅವರು ಮುಂದಿನ ಆರು ವರ್ಷಗಳ ಕಾಲ ಶಾಸಕತ್ವಕ್ಕೆ ಅನರ್ಹರಾಗಿದ್ದಾರೆ. ಈ ಆದೇಶದಿಂದ ಸದ್ಯಕ್ಕೆ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಜೈಲಿನಿಂದ ರಿಲೀಸ್ ಆಗಿ ಬಂದು ನಂತರ ಬಿ.ಜೆ.ಪಿ ಪಕ್ಷವನ್ನು ತೊರೆದಿದ್ದರು, ಆದಾದ ನಂತರ 2023ರಲ್ಲಿ ತಮ್ಮದೇ ಸ್ವಂತ ಪಕ್ಷವಾದ ಕೆ.ಆರ್.ಪಿ.ಪಿ ಪಕ್ಷವನ್ನು ಸ್ಥಾಪಿಸಿದ ರೆಡ್ಡಿ, ಗಂಗಾವತಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಆದಾದ ನಂತರ ಪಕ್ಷವನ್ನು ವಿಲೀನಗೊಳಿಸಿ ಬಿ.ಜೆ.ಪಿಗೆ ಸೇರ್ಪಡೆಯಾದರು. ಸದ್ಯ ರೆಡ್ಡಿಯವರು ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹಿನ್ನೆಲೆಯಲ್ಲಿ ಇದೀಗ ಜನಾರ್ದನ ರೆಡ್ಡಿ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಜನಾರ್ದನ ರೆಡ್ಡಿ ಶಿಕ್ಷೆ ಮುಗಿಸಿ ಬಿಡುಗಡೆಯಾಗುವವರೆಗೆ ಅಥವಾ ಈ ಶಿಕ್ಷೆಗೆ ಕೋರ್ಟ್ ತಡೆ ನೀಡುವವರೆಗೆ ಇರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಿಮಯದ ಪ್ರಕಾರ ಯಾವುದೇ ಶಾಸಕ ಅಥವಾ ಸಂಸದ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಶಾಸಕ ಸ್ಥಾನ ರದ್ದಾಗಲಿದೆ. ಅದರಂತೆ ಈಗ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 6 ತಿಂಗಳೊಳಗೆ ಉಪ ಚುನಾವಣೆ ನಡೆಯಬೇಕಿದೆ.
7 ವರ್ಷ ಜೈಲು ಶಿಕ್ಷೆಯಾಯ್ತು. ಶಾಸಕ ಸ್ಥಾನದಿಂದ ಅನಹರ್ಗೊಂಡಿದ್ದು ಆಯ್ತು. ಹಾಗಾದ್ರೆ ರೆಡ್ಡಿಯ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಒಂದು ವೇಳೆ ಜನಾರ್ದನ ರೆಡ್ಡಿಗೆ 6 ತಿಂಗಳ ಒಳಗಾಗಿ ಜಾಮೀನು ಸಿಕ್ಕಿದ್ದೇ ಆದ್ರೆ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಅನರ್ಹಗೊಂಡ ಶಾಸಕ ಸ್ಥಾನವನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ.. 6 ತಿಂಗಳೊಳಗೆ ಬೇಲ್ ಸಿಗದೇ ಇದ್ದಲ್ಲಿ ಬೈ ಎಲೆಕ್ಷನ್ ನಡೆಸಬೇಕು.. ಆದಾದ ಮೇಲೆ 6 ವರ್ಷ ಜನಾರ್ದನರೆಡ್ಡಿ ಯಾವುದೇ ಚುನಾವಣೆಗೆ ಭಾಗವಹಿಸುವಂತ್ತಿಲ್ಲ, ಹೀಗಾಗಿ ರಾಜಕೀಯ ಭವಿಷ್ಯಕ್ಕೆ ಇದು ಕುತ್ತಾಗಿ ಪರಿಣಮಿಸಲಿದೆ..
ಒಟ್ಟಿನಲ್ಲಿ ಬಳ್ಳಾರಿಯಲ್ಲಿ ಗಣಿ ದಣಿಯಾಗಿ ಹವಾ ಎಬ್ಬಿಸಿದ್ದ ಜನಾರ್ದನ ರೆಡ್ಡಿ ಇಂದು ಜೈಲು ಅತಿಥಿಯಾಗಿದ್ದಾರೆ. ಸೆರೆವಾಸದ ಜೊತೆಗೆ ಈಗ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಂಡು, ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದ್ದಾರೆ. ಇನ್ನೂ 3 ವರ್ಷ ಶಿಕ್ಷೆ ಅವಧಿ ಇದೆ.. ಅಷ್ಟರೊಳಗೆ ಜಾಮೀನು ಪಡೆದು ಹೊರಗೆ ಬರ್ತಾರಾ. ಇಲ್ಲ ಪೂರ್ಣ ಪ್ರಮಾಣದಲ್ಲಿ ಶಿಕ್ಷೆ ಅನುಭವಿಸಿ ರಾಜಕೀಯಕ್ಕೆ ಫುಲ್ ಸ್ಟಾಪ್ ಇಡ್ತಾರಾ ನೋಡಬೇಕಿದೆ.