
ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಬೈಪಾಸ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎಡಗಡೆ ಓವರ್ ಟೇಕ್ ಮಾಡಲು ಹೋಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮ ಜಯಂತಿಯ ಮೆರವಣಿಗೆ ವೀಕ್ಷಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮುರನಾಳ ಗ್ರಾಮದ ನಿವಾಸಿಗಳಾದ ಸಿದ್ದು ರಾಜು ಗಣಿ (16), ಸಂತೋಷ ಕೂಡಗಿ (16) ಮತ್ತು ಕಾಮಣ್ಣ ಕುಪಲಿ (16) ಮೃತ ಬಾಲಕರು. ಸದ್ಯ ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಊರಲ್ಲಿ ಹನುಮ ಜಯಂತಿ ಹಿನ್ನೆಲೆ ಡಿಜೆ ಮೆರವಣಿಗೆ ಆಯೋಜಿಸಲಾಗಿತ್ತು. ಹೀಗಾಗಿ ಡಿಜೆ ಮೆರವಣಿಗೆ ನೋಡಲು ಮೂವರು ಬಾಲಕರು ಬೈಕ್ನಲ್ಲಿ ತೆರಳಿದ್ದರು. ಗದ್ದನಕೇರಿ ಕ್ರಾಸ್ನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಬೈಕ್ಗೆ ಕ್ಯಾಂಟರ್ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂವರು ಬಾಲಕರು ಕೂಡಾ ದಾರಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಡಗಡೆಯಿಂದ ಓವರ್ ಟೇಕ್ ಮಾಡಲು ಹೋಗಿ ಬಾಲಕರು ಯಡವಟ್ಟು ಮಾಡಿಕೊಂಡಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಪಲ್ಟಿ ಆಗಿದ್ದು, ನೇರವಾಗಿ ಕ್ಯಾಂಟರ್ ಅಡಿಗೆ ಸಿಲುಕಿದ್ದಾರೆ. ಇನ್ನು ಬಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ತ್ರಿಬಲ್ ರೈಡಿಂಗ್ ಹೊರಟ್ಟಿದ್ದರು. ಎಡಗಡೆ ಓವರ್ ಟೇಕ್ ಕಾರಣದಿಂದ ಜೀವ ಕಳೆದುಕೊಂಡಿದ್ದಾರೆ.