
ಬಾಗಲಕೋಟೆ: ಪುರಸಭೆ ಹಿಂಭಾಗಲ್ಲಿ ಆರಂಭವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಇನ್ನೂ ಆರಂಭವಾಗದೆ ಇರುವುದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

j3tvkannada
ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣದ ಜಾಗ ನಿಗದಿ ಪಡಿಸಲು ಆರಂಭದಲ್ಲಿ ಹಲವು ಗೊಂದಲ ಏರ್ಪಟ್ಟಿದ್ದವು. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ, ನಂತರ ಪಿ.ಕೆ.ಪಿ.ಎಸ್ ಬ್ಯಾಂಕ್ ಎದುರುಗಡೆ ಹೀಗೆ ಕೊನೆಗೆ ಪುರಸಭೆ ಹಳೆಯ ಕಚೇರಿ (ಈಗಿನ ಉಪನೋಂದಣಿ ಕಚೇರಿ) ಹಿಂಭಾಗ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ 2024ರ ಆಗಸ್ಟ್ 30ರಂದು ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ಅವರು ಭೂಮಿ ಪೂಜೆ ನೆರವೇರಿಸಿದ್ದರು.
ಆನಂತರ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ ಮುಕ್ತಾಯ ಹಂತಕ್ಕೆ ತಲುಪಿ ತಿಂಗಳುಗಳೆ ಕಳೆದಿವೆ. ನೆಲಹಾಸು, ವಿದ್ಯುತ್ ಸಂಪರ್ಕ ಸೇರಿದಂತೆ ಕೆಲವು ವ್ಯವಸ್ಥೆಯಾದರೆ ಕಟ್ಟಡ ಬಳಕೆಗೆ ಸಜ್ಜುಗೊಳ್ಳುವುದು. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಸ್ಥಗಿತಗೊಂಡಿದ್ದು, ಅರ್ಧಕ್ಕೆ ನಿಂತ ಕಟ್ಟಡ ಅನೈತಿಕ ಚಟುವಟಿಕೆಗಳ, ಮದ್ಯಪಾನ ಪ್ರಿಯರ ಅಡ್ಡೆಯಾಗಿದೆ. ಅಲ್ಲಿ ಅಳವಡಿಸಲು ತಂದಿರುವ ವಸ್ತುಗಳು ದಿನದಿಂದ ದಿನಕ್ಕೆ ಕಾಣೆಯಾಗುತ್ತಿವೆ. ಹಲವರು ಅಲ್ಲಿಯೇ ತಂಗಲು ಆರಂಭಿಸಿದ್ದಾರೆ. ನೆಲಹಾಸು ಮಾಡಲು ತಂದಿಟ್ಟ ಸಿಮೆಂಟ್ ಚೀಲಗಳು ಹಾಳಾಗುತ್ತಿವೆ. ಕೇವಲ ಜನ ಮಾತ್ರವಲ್ಲ ಕೆಲವು ಬೀದಿ ನಾಯಿಗಳು ಅಲ್ಲಿ ವಾಸಕ್ಕೆ ಜಾಗ ಮಾಡಿಕೊಂಡಿವೆ.

j3tvkannada
ಜಿಲ್ಲೆಯಲ್ಲಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್ಗಳು ಮೊದಲು ಆರಂಭವಾಗಲಿ ಎಂಬ ಉದ್ದೇಶ ಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀ ಅವರದ್ದಾಗಿತ್ತು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದರು. ಆದರೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೊ ಅಥವಾ ಖಾಸಗಿ ಹೊಟೆಲ್ಗಳ ವ್ಯಾಪಾರಕ್ಕೆ ಕತ್ತರಿ ಬೀಳಬಹುದೆಂದು ಪ್ರಭಾವ ಬೀರಿ ಕಾಮಗಾರಿ ಆಮೆವೇಗ ಪಡೆದಿರಬಹುದು ಎಂಬುದು ಸ್ಥಳೀಯರ ಅನುಮಾನವಾಗಿದೆ.
ಇಲ್ಲಿನ ಉಪನೋಂದಣಿ ಕಚೇರಿಗೆ ಕೆಲಸಕ್ಕೆಂದು ನಮ್ಮ ಮನೆಯಿಂದ ಆರು ಜನ ಬಂದಿದ್ದೆವು. ಕೆಲಸ ಮುಗಿಯಲು ಸಮಯ ಬಹಳಷ್ಟಾಯಿತು. ಇಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದರೆ ನಮಗೆ ಕಡಿಮೆ ಖರ್ಚಿನಲ್ಲಿ ಊಟ, ಉಪಹಾರ ವ್ಯವಸ್ಥೆಯಾಗುತ್ತಿತ್ತು ಎಂದು ಬನಹಟ್ಟಿಯ ನಿವಾಸಿ ಅನಿಲ ಸಾಳುಂಕೆ ಹೇಳಿದರು.
ಸರ್ಕಾರದ ಯೋಜನೆಯೊಂದು ಮತಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಈ ರೀತಿ ಕುಂಟುತ್ತ ಸಾಗಿದ್ದು ಖೇದಕರ. ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ ಅದನ್ನು ಪೂರ್ಣಗೊಳಿಸದೆ, ಅಲ್ಲಿನ ವಸ್ತುಗಳು ಕಳ್ಳಕಾಕರ ಪಾಲಾಗುತ್ತಿದ್ದು, ಗುತ್ತಿಗೆದಾರರು ಅದಕ್ಕೊಬ್ಬ ಕಾವಲುಗಾರರನ್ನಾದರು ನೇಮಿಸಬೇಕಿತ್ತು. ನಿರ್ಮಾಣ ಕಾರ್ಯ ಆರಂಭವಾಗಿ ಹಲವು ತಿಂಗಳುಗಳಾದರು ಪೂರ್ಣಗೊಂಡಿಲ್ಲ ಎಂದರೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಎಂಥದ್ದು ಎಂಬುದು ಅರ್ಥವಾಗುತ್ತದೆ. ಇನ್ನಾದರು ಅಧಿಕಾರಿಗಳು, ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಿ ಕೆಲಸ ಪೂರ್ಣಗೊಳಿಸಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪ್ರತಿಕ್ರಿಯಿಸಿದರು.