
ರಾಮನಗರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 620 ಅಂಕ (ಶೇ99.2) ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಮತ್ತೀಕೆರೆ ಶೆಟ್ಟಿಹಳ್ಳಿ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿನಿ ಸಿ.ಎಸ್. ಹಂಸಿಣಿ ಬಡತನದಲ್ಲಿ ಅರಳಿದೆ ಪ್ರತಿಭೆ.

j3tvkannada
ಹಂಸಿಣಿ ಚಕ್ಕೆರೆ ಗ್ರಾಮದ ಆಶಾ ಹಾಗೂ ಶಿವಣ್ಣ ದಂಪತಿ ಪುತ್ರಿ. ಅವರ ತಂದೆ ಶಿವಣ್ಣ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ಚಕ್ಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ 6ನೇ ತರಗತಿಗೆ ಆದರ್ಶ ಶಾಲೆಗೆ ದಾಖಲಾದ ಹಂಸಿಣಿ, ತರಗತಿ ಹಾಗೂ ಮನೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಳು. ಯಾವುದೇ ಟ್ಯೂಷನ್ ನೆರವು ಇಲ್ಲದೆ ಶಿಕ್ಷಕರಿಂದ ಕೇಳಿದ ಪಾಠದ, ಮಾರ್ಗದರ್ಶನದಲ್ಲಿ ಹೆಚ್ಚು ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪ್ರಥಮ ಭಾಷೆ ಆಂಗ್ಲ ವಿಷಯದಲ್ಲಿ 125ಕ್ಕೆ 121, ದ್ವಿತೀಯ ಭಾಷೆ ಕನ್ನಡದಲ್ಲಿ 100ಕ್ಕೆ 100, ತೃತೀಯ ಭಾಷೆ ಹಿಂದಿಯಲ್ಲಿ 100ಕ್ಕೆ 99, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ್ದಾಳೆ.
ದಿನವೊಂದಕ್ಕೆ ರಾತ್ರಿ ವೇಳೆ ಐದು ಗಂಟೆ ಸತತ ಅಭ್ಯಾಸ ಮಾಡುತ್ತಿದ್ದೆ. ತರಗತಿಗಳಲ್ಲಿ ಕಲಿತ ಪಾಠ ಮನೆಗೆ ಬಂದು ಮನವಿಟ್ಟು ಅಭ್ಯಾಸ ಮಾಡುತ್ತಿದ್ದೆ. ಪಾಠವನ್ನು ಅಂದೇ ಮನನ ಮಾಡಿಕೊಳ್ಳುತ್ತಿದೆ. ಸತತ ಅಭ್ಯಾಸ, ಪರಿಶ್ರಮ, ಪೋಷಕರ ಪೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹಂಸಿಣಿ ಸಂತಸ ಹಂಚಿಕೊಂಡಳು.
ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳೊಂದಿಗೆ ಪಿಯು ಮುಗಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಆಸೆ ಇದೆ ಎಂದು ಭವಿಷ್ಯದ ಆಸೆ ಬಿಚ್ಚಿಟ್ಟಳು. ಬಡತನದ ನಡುವೆಯೂ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಆಸೆ ಇದೆ. ಅವಳ ಆಸೆ ಈಡೇರಿಸುವುದಷ್ಟೇ ನಮ್ಮ ಬಯಕೆ ಎಂದು ಪೋಷಕರು ಸಂತಸ ಹಂಚಿಕೊಂಡರು.