
ಬೆಳಗಾವಿ: ನವೋದಯ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ, ಕೊರೊನಾ ಸಂಕಷ್ಟ ಕಾಲದಲ್ಲಿ ಅದು ಕೈಗೂಡಲಿಲ್ಲ. ಹೀಗಿದ್ದರೂ ಛಲ ಬಿಡದೆ ಓದಿದ್ದಕ್ಕೆ ಇಂದು ಫಲ ಸಿಕ್ಕಿದೆ. ಐದು ವರ್ಷಗಳ ಹಿಂದಿನ ನೋವನ್ನು ಈ ಸಾಧನೆ ಮರೆಸಿದೆ ಎಂದು ರೂಪಾ ಅವರು ಹೇಳಿದ್ದಾರೆ.

j3tvkannada
ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ರೂಪಾ, ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಷಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ನಡೆಸಿದ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಜಿಲ್ಲೆಗೆ 6ನೇ ಸ್ಥಾನ ಗಳಿಸಿದ್ದಾರೆ. ಈಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಸಾಧನೆ ಮೆರೆದಿದ್ದಾರೆ.
ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿತ್ತು. ಶಿಕ್ಷಕರು ಉತ್ತಮವಾಗಿ ಬೋಧಿಸುತ್ತಿದ್ದರು. ಶೈಕ್ಷಣಿಕ ಗೊಂದಲವಿದ್ದರೆ ಬಗೆಹರಿಸಿ, ಪುಸ್ತಕ ಒದಗಿಸುತಿದ್ದರು. ಕಳೆದ ವರ್ಷ ಬೇಸಿಗೆಯಲ್ಲಿ ಟ್ಯೂಷನ್ ಹೋಗಿದ್ದು ಬಿಟ್ಟರೆ ಮನೆಯಲ್ಲೇ ಓದಿದ್ದೆ. ಯೋಜನಾಬದ್ಧ ಅಭ್ಯಾಸದಿಂದ ಪೂರ್ಣ ಅಂಕ ಸಿಕ್ಕಿತು ಎಂದು ರೂಪಾ ಹೇಳಿದರು.
ನಮ್ಮೂರಿನ ಖಾಸಗಿ ಶಾಲೆಯಲ್ಲಿ 1ರಿಂದ 2ನೇ ತರಗತಿ ಓದಿ, ಬೈಲಹೊಂಗಲದ ಖಾಸಗಿ ಶಾಲೆಯಲ್ಲಿ 3ನೇ ತರಗತಿಗೆ ಪ್ರವೇಶ ಪಡೆದಿದ್ದೆ. 4ನೇ ತರಗತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದವಳು ಇಲ್ಲಿಯೇ ಓದು ಮುಂದುವರಿಸಿದ್ದೇನೆ. 1ನೇ ತರಗತಿಯಿಂದಲೂ ನಾನು ಪ್ರಥಮ ಸ್ಥಾನ ಯಾರಿಗೂ ಬಿಟ್ಟು ಕೊಟ್ಟಿಲ್ಲ. ಈಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ನಾನೇ ಮೊದಲಿಗಳು ಎಂದು ಸಂತಸಪಟ್ಟರು ರೂಪಾ.
ನಿರಂತರ ಚಟುವಟಿಕೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಗಣಿತ ಮೇಳ, ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ ಮತ್ತಿತರ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿ ಕೈಗೊಂಡೆವು. ಎರಡು ಬಾರಿ ಸರಣಿ ಪರೀಕ್ಷೆ ನಡೆಸಿದೆವು. ಇದರಿಂದಾಗಿ ರೂಪಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ ಎನ್ನುತ್ತಾರೆ ದೇವಲಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಡಿ.ಮರೆನ್ನವರ.