
ಯಾದಗಿರಿ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಯ 59ನೇ ವರ್ಷಾಚರಣೆ ಅಂಗವಾಗಿ ಯಾದಗಿರಿಯ ಜಿಲ್ಲಾ ಕ್ರೀಡಾಂಣದಲ್ಲಿ ಐಟಿಐ ತರಬೇತಿದಾರರಿಗಾಗಿ ಕ್ರಿಕೆಟ್ ಟೂರ್ನಿ ಸಂಘಟಿಸಲಾಗಿತ್ತು.

j3tvkannada
ಸರ್ಕಾರಿ ಐಟಿಐ ಹಾಗೂ ಜವಾಹರ್ ಐಟಿಐ ತರಬೇತಿದಾರರ ಎರಡು ತಂಡಗಳು ಭಾಗವಹಿಸಿದ್ದವು. ಈ ಟೂರ್ನಿಯಲ್ಲಿ ಸರ್ಕಾರಿ ಐಟಿಐ ಸಂಸ್ಥೆ ವಿಜೇತವಾಯಿತು. ಅವರಿಗೆ ಟ್ರೋಫಿ ಮತ್ತು ನೇತಾಜಿ ಫೋಟೋ ನೀಡಿ ಮಾತನಾಡಿದ ಎ.ಐ.ಡಿ.ವೈ.ಒ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್, ಎ.ಐ.ಡಿ.ವೈ.ಒ ಸಂಘಟನೆ ಇಡೀ ದೇಶದಾದ್ಯಂತ ಯುವ ಜನರ ಹಲವು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದೆ.
ಹಾಗೆಯೇ ಯುವ ಜನರಲ್ಲಿ ಐಕ್ಯತೆ ಮತ್ತು ಸೌಹಾರ್ದತೆ ಬೆಸೆಯಲು ಈ ರೀತಿಯ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದೆ ಎಂದರು. ಕ್ರೀಡೆಯು ಅವರಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ಸ್ನೇಹ, ಸೌಹಾರ್ದತೆ ಬೆಳೆಸಲು ಅನುಕೂಲವಾಗುತ್ತದೆ ಎಂದರು. ಅಷ್ಟೇ ಅಲ್ಲದೆ ಯುವ ಜನರಲ್ಲಿ ಉನ್ನತ ನೀತಿ, ಸಂಸ್ಕೃತಿ ಆದರ್ಶಗಳನ್ನು ಬೆಳೆಸಲು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ವಿಚಾರಗಳನ್ನು ಹರಡಲು ಪ್ರಯತ್ನಿಸುತ್ತಿದೆ. ಆ ಮೂಲಕ ಯುವ ಜನರಲ್ಲಿ ವೈಚಾರಿಕತೆ ಮೂಡಿಸಲು ಸಂಘಟನೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಎರಡು ಸಂಸ್ಥೆಗಳ ತರಬೇತಿದಾರರು ಉತ್ಸಾಹ ಹಾಗೂ ಖುಷಿಯಿಂದ ಟೂರ್ನಿಯಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ಎಸ್ ಕೋಟಗೇರಾ ನಿರ್ಣಾಯಕರಾಗಿ ಭಾಗವಹಿಸಿದ್ದರು. ಯುವ ಮಿತ್ರರಾದ ಶುಭಾಷ್ ಬಾವನೋರ್, ವೆಂಕಟೇಶ್, ತಿಮ್ಮಯ್ಯ ಕೊನೇರು ಉಪಸ್ಥಿತರಿದ್ದರು.