
ಚಿತ್ರದುರ್ಗ: ಭಾರತವು ಅಪಾಯಕಾರಿ ಹಂತಕ್ಕೆ ತಲುಪಿದೆ. ಆದ್ದರಿಂದ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನದ ಭಾಗವಾಗಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಏ.26ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆ ಮುಖಂಡ ಕೆ.ಎಲ್. ಅಶೋಕ್ ತಿಳಿಸಿದರು. ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಹೋರಾಟಗಾರ್ತಿ ಮೇಧಾ ಪಾಟ್ಕರ್, ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನಶ್ ಮೇವಾನಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ನಟ ಪ್ರಕಾಶ್ ರೈ, ಚಿಂತಕ ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕೇರಳ, ಪಂಜಾಬ್, ದೆಹಲಿ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

j3tvkannada
ಯಾವ ರಾಜಕೀಯ ಪಕ್ಷವೂ ಸಂವಿಧಾನ ಉಳಿಸಿಕೊಳ್ಳುವ ಆಸಕ್ತಿ ತೋರಿಲ್ಲ. ಸಂವಿಧಾನ ರಕ್ಷಣೆ ಮಾಡಿಕೊಳ್ಳುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮೇಲಿದೆ. ಸಂವಿಧಾನ ಉಳಿದರೆ ದೇಶ ಹಾಗೂ ಜನರು ಉಳಿಯುತ್ತಾರೆ ಎಂದರು. ಸಂವಿಧಾನದ ಆಶಯ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕನಸಿ ಭಾರತವನ್ನು ರಕ್ಷಿಸಿಕೊಳ್ಳುವ ತುರ್ತು ಎದುರಾಗಿದೆ. ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಪ್ರಯತ್ನ ಜ.26ರಿಂದ ಶುರುವಾಗಿದೆ. 3 ತಿಂಗಳ ಅವಧಿಯಲ್ಲಿ 10 ಸಾವಿರ ಜನರನ್ನು ತಲುಪಿದ್ದು, ಈ ಎಲ್ಲರೂ ಸಮಾವೇಶಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಈ ಪ್ರಯತ್ನ ಮಾಡುತ್ತಿದ್ದೇವೆ. ರೈತ, ದಲಿತ, ಕನ್ನಡ ಪರ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯಗಳು ಇದಕ್ಕೆ ಕೈಜೋಡಿಸಿವೆ. ಸಮಾವೇಶದ ಅಂಗವಾಗಿ ಕಲಬುರ್ಗಿಯ ವಾಡಿಯಿಂದ ಬೈಕ್ ಜಾಥಾ ಹೊರಡಲಿದೆ. ಅಂಬೇಡ್ಕರ್ ಭೇಟಿ ನೀಡಿದ್ದ ವಾಡಿಯ ನೆನಪಿಗಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 20 ಜಿಲ್ಲೆಗಳಲ್ಲಿ ಸಂಚರಿಸುವ ಜಾಥಾವು ಏ.25ರಂದು ದಾವಣಗೆರೆ ತಲುಪಲಿದೆ ಎಂದರು. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಬಿಜೆಪಿ ನಾಯಕರು ಹೇಳುತ್ತಿರುವುದನ್ನು ಗಮನಿಸಿದರೆ ಸಂವಿಧಾನಕ್ಕೆ ಅಪಾಯ ಖಚಿತ. ಜನರನ್ನು ಎಚ್ಚರಿಸಲು ಸಮಾವೇಶ ನಡೆಸಲಾಗುತ್ತಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ವಕೀಲ ಬಿ.ಕೆ. ರಹಮತ್ವುಲ್ಲಾ ತಿಳಿಸಿದರು. ನಿವೃತ್ತ ಪ್ರಾಂಶುಪಾಲ ಶಿವಕುಮಾರ್, ವಕೀಲ ಚಂದ್ರಪ್ಪ, ಮುಖಂಡರಾದ ಟಿ.ಶಫಿವುಲ್ಲಾ, ಸಲೋಮನ್ ರಾಜ್ಕುಮಾರ್, ಧನಂಜಯ, ಸಿರಾಜ್, ಹನುಮಂತಪ್ಪ ಇದ್ದರು.