
ಹುಬ್ಬಳ್ಳಿ : ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮೃತ ಬಾಲಕಿ ಮನೆಗೆ ಭೇಟಿ ನೀಡಿದ್ದಾರೆ. ಪಾಲಕರಿಗೆ ಸಾಂತ್ವನ ಹೇಳಿದ್ದಾರೆ. ಪ್ರಾಥಮಿಕ ವೈದ್ಯಕೀಯ ವರದಿ ಪ್ರಕಾರ, ಮೃತಪಟ್ಟ ಮಗುವಿನ ಖಾಸಗಿ ಅಂಗ ಹಾಗೂ ಇತರೆಡೆ ಗಾಯವಾಗಿರುವುದು ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 05 ವರ್ಷದ ಮಗುವಿನ ಅಮಾನುಷ ಕೃತ್ಯವೆಸಗಿ ಕೊಂದ ಬಿಹಾರಿ ಮೂಲದ ಪಾಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬಾಲಕಿ ಮನೆಗೆ ಭೇಟಿ ನೀಡಿದ ಬಳಿಕ ನಾಗಲಕ್ಷ್ಮೀ ಚೌಧರಿ ಅವರು ವೈದ್ಯಕೀಯ ವರದಿ ಬಗ್ಗೆ ಮಾತನಾಡಿದರು. ಬಾಲಕಿ ‘ಮರಣೋತ್ತರ ವೈದ್ಯಕೀಯ ವರದಿ ದೊರೆತ ನಂತರ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ವರದಿ ಪರೀಕ್ಷಿಸುತ್ತಾರೆ. ಮಗು ಖಾಯಿಲೆ ಬಿದ್ದು ಸತ್ತಿಲ್ಲ. ಅವಳ ಮೇಲೆ ದೌರ್ಜನ್ಯ ಎಸಗುವಾಗ ತುಂಬಾ ಒದ್ದಾಡಿ ಕೂಗಾಡಿದ್ದಾಳೆ. ಆಗ ಅವಳ ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ಅವರು ವಿವರಿಸಿದರು.

j3tvkannada
ಮನೆಯಂಗಳದಲ್ಲಿಯೇ ಮಗುವನ್ನು ಬಿಟ್ಟು ತಾಯಿ ಒಳಗಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಮಗುವಿಗೆ ಚಾಕಲೇಟ್ ಆಸೆ ತೋರಿಸಿ ಎತ್ತಿಕೊಂಡು ಹೋಗಿದ್ದಾನೆ. ಸಣ್ಣ ಮಕ್ಕಳನ್ನು ಸಹ ಈ ನೀಚರು ಬಿಡುತ್ತಿಲ್ಲ.
ನಾವು ನಮ್ಮ ಮಕ್ಕಳನ್ನು ಹುಷಾರಾಗಿ ಕಣ್ಣಿನಲ್ಲಿ ಕಣ್ಣು ಇಟ್ಟು ನೋಡಬೇಕು ಎಂದರು. ನಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಪ್ರತಿ ಪೋಷಕರ ಜವಾಬ್ದಾರಿ ಆಗಿದೆ. ತೆರೆದ ಮನೆ ಕುರಿತು ಸಂಘ, ಸಂಸ್ಥೆಗಳು, ಸರ್ಕಾರ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ಈ ಸಂಬಂಧ, ಸಾರ್ವಜನಿಕರು ಮತ್ತು ಪೊಲೀಸ್ ಸಹಕಾರ ಅಗತ್ಯ ಎಂದು ಸಲಹೆ ನೀಡಿದರು. ಹತ್ಯೆಗೈದ ಬಿಹಾರಿ ವ್ಯಕ್ತಿ ನಗರಕ್ಕೆ ಗಾರೆ ಕೆಲಸಕ್ಕಾಗಿ ಬಂದಿದ್ದ.
ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಕೆಲಸ ಅರಸಿ ಬರುತ್ತಾರೆ. ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕೆಲಸಗಳಿಗಾಗಿ ಆಂಧ್ರಪ್ರದೇಶ, ಮಧ್ಯ ಪ್ರದೇಶ, ಬಿಹಾರ ಸೇರಿದಂತೆ ಇನ್ನಿತರ ಉತ್ತರ ಭಾರತದ ಪ್ರದೇಶಗಳಿಂದ ಇಲ್ಲಿಗೆ ವಲಸೆ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಬೇರೆ ರಾಜ್ಯದವರು ತೊಡಗಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಜಿಲ್ಲಾಡಳಿತ ಕಾರ್ಮಿಕರ ಸಮೀಕ್ಷೆ ಕೈಗೊಳ್ಳಬೇಕು. ಇವರು ಸ್ಥಳೀಯ ನಿವಾಸಗಳೇ ಅಥವಾ ಬೇರೆ ಕಡೆಯಿಂದ ಬಂದವರೇ ಸ್ಪಷ್ಟ ಮಾಹಿತಿ ಕಲೆ ಹಾಕಬೇಕಿದೆ ಎಂದು ಅವರು ತಿಳಿಸಿದರು.