
ವಿಜಯಪುರ: ಎಲ್ಲವೂ ಸೇರಿ ಒಮ್ಮತದ ಅಭಿಪ್ರಾಯ ವ್ಯಕ್ತವಾದರೆ ಮುಂದಿನ ವಿಜಯದಶಮಿ ದಿನ ಹೊಸ ರಾಜಕೀಯ ಪಕ್ಷ ಘೋಷಿಸುವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಹಿಂದೂ ನಾಯಕರನ್ನು ಮೂಲೆಗುಂಪು ಮಾಡುವ ಕುತಂತ್ರ ಯಡಿಯೂರಪ್ಪ ಕುಟುಂಬದಿಂದ ನಡೆದಿದೆ. ಬಿ.ವೈ.ವಿಜಯೇಂದ್ರ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿಸಿದರೆ, ರಾಜ್ಯದ ಜನ ಅಭಿವೃದ್ಧಿ ಮತ್ತು ಸನಾತನ ಧರ್ಮ ರಕ್ಷಣೆಗೆ ನಿರ್ಧರಿಸುವೆ. ಜನಜಾಗೃತಿ ಮೂಡಿಸುವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನನ್ನ ಹೋರಾಟ ಮೋದಿ ಅಥವಾ ಪಕ್ಷದ ವಿರುದ್ಧ ಅಲ್ಲ. ಯಡಿಯೂರಪ್ಪ ಕುಟುಂಬವೇ ಬೇಕು ಎನ್ನುವುದಾದರೆ, ಮುಂದಿನ ನಿರ್ಣಯ ಕೈಗೊಳ್ಳುವೆ. ಕಾಂಗ್ರೆಸ್ ಜೊತೆ ಬಿ.ಎಸ್.ಯಡಿಯೂರಪ್ಪ ಅವರದ್ದು ಹೊಂದಾಣಿಕೆ ಇದೆ. ಡಿ.ಕೆ ಶಿವಕುಮಾರ್ ಜೊತೆ ವ್ಯಾಪಾರ ಇದೆ, ಜಮೀರ್ ಅಹ್ಮದ ಖಾನ್ ಜೊತೆ ಸರಸ ಸಲ್ಲಾಪವಿದೆ. ರಾಜ್ಯದಲ್ಲಿ ಬಿಜೆಪಿಯ ಮಹತ್ವ ಕುಸಿಯಲು ಬಿ.ವೈ.ವಿಜಯೇಂದ್ರ ಕಾರಣ ಎಂದು ಯತ್ನಾಳ್ ಹೇಳಿದ್ದಾರೆ.