
ಚಿಕ್ಕಬಳ್ಳಾಪುರ : ಎತ್ತಿನಹೊಳೆ ಯೋಜನೆಯಿಂದ ಇನ್ನಷ್ಟು ನೀರು ಪಡೆಯುವ ಅವಕಾಶವಿದೆ. ಈ ಯೋಜನೆಗೆ 5,300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಿದರೆ ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದು ಭಾರತೀಯ ರೈತ ಒಕ್ಕೂಟ ರಾಜ್ಯ ಅಧ್ಯಕ್ಷ ಗೋವಿಂದರೆಡ್ಡಿ ಒತ್ತಾಯಿಸಿದರು. ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ಮುಗಿದಿದೆ. ಇನ್ನು ₹ 5,300 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಗೆ ನೀರು ಬರಲಿದೆ. ಈಗಾಗಲೆ ವಾಣಿವಿಲಾಸ ಸಾಗರ ತುಂಬಿದೆ. 90 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿಗೆ ವಾಣಿವಿಲಾಸ ಸಾಗರ ತುಂಬಿದೆ ಎಂದರು.

ಎತ್ತಿನಹೊಳೆ ನೀರನ್ನು ಪೈಪ್ಲೈನ್ ಮೂಲಕ ನಂದಿ ತಪ್ಪಲಿನ ಚಿತ್ರಾವತಿ, ಉತ್ತರಪೆನ್ನಾರ್, ಪಾಪಗ್ನಿ, ಅರ್ಕಾವತಿ ಹಾಗೂ ದಕ್ಷಿಣ ಪೆನ್ನಾರ್ ನದಿಗಳಿಗೆ ಹರಿಸಬೇಕು. ಪ್ರತ್ಯೇಕ ಜಲಾಶಯದ ಅವಶ್ಯಕತೆ ತಪ್ಪಿಸಬೇಕು ಎಂದು ಸಲಹೆ ನೀಡಿದರು. ನೀರಾವರಿ ತಜ್ಞ ಪ್ರೊ.ಪಿ.ನರಸಿಂಹಪ್ಪ ಮಾತನಾಡಿ, ಸಹಕಾರ ಸಂಘಗಳಿಗೆ ಬಲ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಗೊಳಿಸಬೇಕು. 3ರ ಬಡ್ಡಿ ದರದಲ್ಲಿ ₹ 10 ಲಕ್ಷದವರೆಗೆ ರೈತರಿಗೆ ಸಾಲ ವಿತರಿಸಬೇಕು. ನೀರಾವರಿ ಬೆಳೆಗಳಿಗೆ ವಿಮೆ ಕಂತನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸರ್ಕಾರಗಳೇ ಪಾವತಿ ಮಾಡುತ್ತಿವೆ. ರಾಜ್ಯ ಸರ್ಕಾರವೂ ವಿಮಾ ಕಂತು ಪಾವತಿ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು. ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.