
ಹಾಸನ : ಇನ್ನು 15 ದಿನದಲ್ಲಿ ಎಲ್ಲಾ ಶಾಸಕರ ಜತೆ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಸಿಎಂ ಭೇಟಿ ಮಾಡಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ”ಪಕ್ಷಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ರೀತಿಯ ಅನುಮಾನ ಬೇಡ. ಎಲ್ಲಾ ಶಾಸಕರ ಒಟ್ಟುಗೂಡಿ, ನಮ್ಮ ಜತೆ ಸಮಿತಿಯಿಂದ 15 ಜನರ ತಂಡ ಈ ವಾರದಲ್ಲಿ ದಿನ ನಿಗದಿ ಮಾಡಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನ ಸೆಳೆಯಲಾಗುವುದು,”ಎಂದು ಭರವಸೆ ನೀಡಿದರು. ”ವಿಶ್ವ ವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧರಿತ ಚರ್ಚೆಗಳು ನಡೆದಿದ್ದು, ಅಭಿವೃದ್ಧಿ ಮತ್ತು ಯೋಗಕ್ಷೇಮ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಎಲ್ಲರ ಪರ ನಿಂತುಕೊಳ್ಳುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಸಚಿವರ ಜತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿರುವುದಿಲ್ಲ. ವಿವಿ ಮುಚ್ಚುವ ನಿರ್ಧಾರವನ್ನು ಇಲ್ಲಿವರೆಗೂ ತೆಗೆದುಕೊಂಡಿಲ್ಲ. ಯಾರು ಗಾಬರಿ ಪಡಬಾರದೆಂದು ಶಿಕ್ಷಣ ಸಚಿವರು ಹೇಳಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಆಗಬಹುದಾದಂತಹ ಬೇಡಿಕೆಯನ್ನು ಮುಂದಿಟ್ಟು ಮನವಿ ಮಾಡೋಣ,” ಎಂದರು.

ಹಾಲಿ ಶಾಸಕ ಎ.ಮಂಜು ಮಾತನಾಡಿ, ”ಯೂನಿವರ್ಸಿಟಿ ಸ್ಥಾಪನೆ ಮಾಡುವುದು ಆ ಜಿಲ್ಲೆಗಳಿಗೆ ಹೆಚ್ಚು ಗೌರವ ತರುವ ಕೆಲಸ ಮಾಡಿದ ಸರಕಾರಗಳಿಗೆ ಗೌರವ ಸಲ್ಲಿಸಬೇಕು. ಅದು ಯಾವುದೇ ಸರಕಾರ ಆಗಿರಲಿ, ಹಳ್ಳಿ ಸೇರಿದಂತೆ ಎಲ್ಲಾ ಮಕ್ಕಳಿಗೂ ವಿದ್ಯೆ ಸಿಗಬೇಕಾದರೆ ವಿವಿಗಳು ಆಯಾ ಜಿಲ್ಲೆಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ,” ಎಂದು ಹೇಳಿದರು. ಹಸಿರು ಭೂಮಿ ಪ್ರತಿಷ್ಠಾನದ ಬಿ.ಕೆ. ಮಂಜುನಾಥ್ ಮಾತನಾಡಿ,”ಸರಕಾರದಲ್ಲಿ ಗೊಂದಲವಿದ್ದು, ಜನರಲ್ಲಿ ವಿಶ್ವವಿದ್ಯಾಲಯ ಉಳಿಯುತ್ತದೆಯೂ ಇಲ್ಲವೊ ಎಂಬುದು ಬೇರೂರಿದೆ. ಈ ಕಮಿಟಿ ಶಾಸಕರು. ಸಂಸದರು ಎಲ್ಲಾ ಸೇರಿ ಸಭೆ ಮಾಡಿ ದೃಢವಾದ ನಿಲುವು ತೆಗೆದುಕೊಂಡರೆ ಖಂಡಿತ ಸರಕಾರ ಒಪ್ಪಲಿದೆ,”ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ.ವೆಂಕಟೇಶ್ಮೂರ್ತಿ, ಧರ್ಮೇಶ್, ಎಚ್.ಕೆ.ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಎಚ್.ಪಿ.ಮೋಹನ್ ಇತರರು ಹಾಜರಿದ್ದರು. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಿ, ”ವಿದ್ಯಾರ್ಥಿಗಳ ಮೊದಲ ಆಯ್ಕೆ ಸರಕಾರಿ ಶಿಕ್ಷಣ ಸಂಸ್ಥೆಗಳು. ಎಂಜಿನಿಯರ್, ವೈದ್ಯಕೀಯ ಯಾವುದೇ ಆಗಿರಲಿ ಸರಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗಿ ಕಡೆ ಹೋಗುತ್ತಾರೆ. ಏನಾದರೂ ಈ ರೀತಿ ತಾತ್ಸರ ಮಾಡಿದರೇ ಮುಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೆ ಆ ಖಾಸಗಿಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ,” ಎಂದು ಎಚ್ಚರಿಸಿದರು.