
ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಣ ಬಿಸಿಲಿನ ತಾಪಕ್ಕೆ ಜನ ತತ್ತರಿಸುವಂತಾಗಿದೆ. ಸದ್ಯ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ 8 ಕ್ಕೆ ಕಣ್ಣು ಕುಕ್ಕುವಷ್ಟು ಇರುವ ಬಿಸಿಲು, ಮಧ್ಯಾಹ್ನದ ಹೊತ್ತಿಗೆ ಜನ ಬೀದಿಗೆ ಇಳಿಯದಷ್ಟು ಪ್ರಖರವಾಗಿರುತ್ತದೆ. ಸಂಜೆ ಆರು ಗಂಟೆಯಾದರೂ ಬಿಸಲಿನ ಪರಿಣಾಮ ಕಡಿಮೆ ಆಗಿರುವುದಿಲ್ಲ. ರಾತ್ರಿ ವೇಳೆ ಕರೆಂಟ್ ಕೈಕೊಟ್ಟರೆ ಜಾಗರಣೆ ಖಚಿತವಾಗುತ್ತಿದೆ. ರಣ ಬಿಸಿಲಿಗೆ ಹೆದರಿರುವ ಜನ ಮಧ್ಯಾಹ್ನ ವೇಳೆ ರಸ್ತೆಗಿಳಿಯಲು ಹಿಂಜರಿಯುತ್ತಿದ್ದಾರೆ. ಈ ಅವಧಿಯಲ್ಲಿ ವಾಹನ ಸಂಚಾರವೂ ಬಹುತೇಕ ವಿರಳವಾಗಿರುತ್ತದೆ. ಕಳೆದ ವಾರದ ಉಷ್ಣಾಂಶಕ್ಕೆ ಹೋಲಿಸಿದರೆ ಈ ವಾರ 1.5 ಡಿಗ್ರಿಯಷ್ಟು ಅಧಿಕವಾಗಿದೆ. ಜತೆಗೆ ಮುಂದಿನ 5 ದಿನಗಳಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಲಿದೆ. ಮಾ.18 ಮತ್ತು19 ರಂದು ಬಿಸಿಗಾಳಿ ಬಿಸುವ ಸಾಧ್ಯತೆ ಇದೆ. ಮಾ.15ರಂದು ಜಿಲ್ಲೆಯ ದೇವರಹಿಪ್ಪರಗಿ, ನಾಲತವಾಡ ಮತ್ತು ತಾಳಿಕೋಟೆಯಲ್ಲಿ 41.2 ಡಿಗ್ರಿ ಸೆಲ್ಸಿಯಸ್, ಬಳ್ಳೊಳ್ಳಿಯಲ್ಲಿ41, ಬಬಲೇಶ್ವರ ಮತ್ತು ಢವಳಗಿಯಲ್ಲಿ40.7 ಹಾಗೂ ತಿಕೋಟಾದಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್ಎನ್ಡಿಎಂಸಿ ವರದಿಯಲ್ಲಿ ದಾಖಲಾಗಿದೆ.

- ಎಳನೀರು: ಕಳೆದ ಬಾರಿ 50 ರೂ. ಮಾರಿದ್ದ ಎಳನೀರು ಈ ಬಾರಿ ದರ ಮತ್ತಷ್ಟು ಹೆಚ್ಚಳವಾದರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಮಾರಾಟಗಾರರು.
- ಹಾಲು : ಈಗಾಗಲೇ ನಗರ ಸೇರಿದಂತೆ ಜಿಲ್ಲಾದ್ಯಂತ ಕಲ್ಲಂಗಡಿ, ಕರಬೂಜ ಸೇರಿದಂತೆ ತಂಪು ನೀಡುವ ನಾನಾ ಹಣ್ಣುಗಳ ಮಾರಾಟ ಭರ್ಜರಿ ನಡೆದಿದೆ. ಅಲ್ಲಲ್ಲಿ ತಂಪು ಪಾನೀಯ ಅಂಗಡಿಗಳು ತಲೆ ಎತ್ತಲು ಆರಂಭಿಸಿವೆ. ಜಾನುವಾರುಗಳು ಕೂಡ ವಿಪರೀತ ಸೆಕೆಂಡ್ ತತ್ತರಿಸಿವೆ. ಇದರಿಂದ ಜಾನುವಾರು ಕಡಿಮೆ ಪ್ರಮಾಣದಲ್ಲಿ ಹಾಲು ಕೊಡುತ್ತಿವೆ.
- ವೇಳಾಪಟ್ಟಿ ಬದಲು: ಜಿಲ್ಲಾದ್ಯಂತ ಕೃಷಿ ಕಾರ್ಮಿಕರು ತಮ್ಮ ಕೆಲಸದ ಅವಧಿ ಬದಲಾಯಿಸಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವ ಬದಲು ಬೆಳಗ್ಗೆ 6 ರಿಂದ 10ರವರೆಗೆ ಮತ್ತು ಸಂಜೆ 4ರಿಂದ 6ರವರೆಗೆ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
- ಪ್ರವಾಸಿಗರ ಸಂಖ್ಯೆ ಇಳಿಮುಖ: ಐತಿಹಾಸಿಕ ಗೋಳಗುಮ್ಮಟ ಹೊಂದಿದ ವಿಜಯಪುರ ಹಾಗೂ ಆಲಮಟ್ಟಿಗೆ ಪ್ರವಾಸಿಗರು ಆಗಮಿಸುವುದು ಸಹಜ. ಬೇಸಿಗೆ ಬಿಸಿಲು ತನ್ನ ಅರ್ಭಟ ತೋರುತ್ತಿರುವ ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನೂ ಏಪ್ರಿಲ್ ಮೇ ತಿಂಗಳಲ್ಲಂತೂ ಬೆರಳೆಣಿಕೆ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದರೂ ಅಚ್ಚರಿಯಿಲ್ಲ.
- ನಿತ್ಯ ಹೆಚ್ಚಾಗುತ್ತಿರುವ ಬಿಸಿಲಿನಿಂದ ಎಲ್ಲರ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು ಮತ್ತು ವೃದ್ಧರಲ್ಲಿಆರೋಗ್ಯ ಸಮಸ್ಯೆ ಕಂಡು ಬರುತ್ತಿವೆ. ಒಟ್ಟಾರೆ, ಮನೆ ಬಿಟ್ಟು ಹೊರ ಬಾರದಂತಾಗಿದೆ. ಉಪವಾಸ ಆಚರಿಸುವ ಹಿರಿಯರು ಕೊಂಚ ಪ್ರಯಾಸ ಪಡುವಂತಾಗಿದೆ ಎನ್ನುತ್ತಾರೆ.