
ವಿಜಯನಗರ: ಜಿಲ್ಲೆಯ ಮಟ್ಟಿಗೆ ಭೌಗೋಳಿಕವಾಗಿ ಮಧ್ಯ ಪ್ರದೇಶದಂತಿದೆ ಹಗರಿ ಬೊಮ್ಮನಹಳ್ಳಿ. ಈ ತಾಲೂಕಿನ ಕೆಚ್ಚಿನಬಂಡಿ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇದರಿಂದಾಗಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ರೈತರಲ್ಲಿ, ಕಬ್ಬು ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.

j3tvkannada
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1249.64 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕೊಳವೆಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ಬೆಳೆಯುವ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ. ಇದುವರೆಗೂ ತಾಲೂಕಿನ ರೈತರು ದುಗ್ಗಾವತಿ, ಮೈಲಾರ ಮತ್ತು ಮುಂಡರಗಿ ಬಳಿ ಇರುವ ಕಾರ್ಖಾನೆಯನ್ನು ಅವಲಂಬಿಸಿದ್ದು, ಸಾಗಣೆ ವೆಚ್ಚ ಹೊರೆಯಾಗಿತ್ತು. ಕಾರ್ಖಾನೆ ಸ್ಥಾಪನೆಯಾದಲ್ಲಿ ಪಶ್ಚಿಮ ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ.
ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಒಂದು ಖಾಸಗಿ ಸಕ್ಕರೆ ಕಾರ್ಖಾನೆ ಇತ್ತು. ಅದು ಪೂರ್ತಿ ಬಂದ್ ಆಗಿ ಸುಮಾರು ಇಪ್ಪತ್ತೈದು ವರ್ಷಗಳೇ ಆಗಿ ಹೋಗಿವೆ. ಅದಾಗಿ ಹೊಸಪೇಟೆಯಲ್ಲಿದ್ದ ಒಂದು ಖಾಸಗಿ ಸಕ್ಕರೆ ಕಾರ್ಖಾನೆ ಕೂಡ ಏಳೆಂಟು ವರ್ಷಗಳ ಹಿಂದೆಯೇ ಮುಚ್ಚಿ ಹೋಗಿದೆ. ಬಹುತೇಕ ಆರ್ಥಿಕ ಲಾಭ ನಷ್ಟಗಳ ಲೆಕ್ಕಾಚಾರದ ಕಾರಣಗಳಿಗೆ ಇವೆರಡೂ ಕಾರ್ಖಾನೆ ಬಂದ್ ಆಗಿ ಇತಿಹಾಸದ ಪುಟ ಸೇರಿವೆ. ಇನ್ನು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಸಕ್ಕರೆ ಕಾರ್ಖಾನೆ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ತಲೆ ಎತ್ತುವ ಹೊಸ ಸಕ್ಕರೆ ಕಾರ್ಖಾನೆ ಈ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಹೊಸ ಭರವಸೆಯ ಆಶಾಕಿರಣವಾಗುವ ಸಾಧ್ಯತೆಗಳಿವೆ.
ಕಾರ್ಖಾನೆಯ ಸಂಪರ್ಕಕ್ಕೆ ಅಗತ್ಯವಾದ ಮೂರು ರಸ್ತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೊಸಪೇಟೆ- ಶಿವಮೊಗ್ಗ ಹೆದ್ದಾರಿ, ಆನೇಕಲ್ಲು- ಹಂಪಾಪಟ್ಟಣ, ಕೆಚ್ಚಿನಬಂಡಿ-ಹಲಗಾಪುರ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಕಾರ್ಖಾನೆ ಉದ್ದೇಶಿತ ಸ್ಥಳದ ಜಮೀನುಗಳ ಅಕ್ಕ ಪಕ್ಕದಲ್ಲಿಯೇ ಪರಿಶಿಷ್ಟ ಜಾತಿಯ ರೈತರ ಜಮೀನುಗಳಿವೆ. ಬದುಕು ಕಟ್ಟಿ ಕೊಳ್ಳಲು ಈ ಜಮೀನುಗಳೇ ಆಸರೆಯಾಗಿದ್ದು, ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನ ಪಡಿಸಿ ಕೊಳ್ಳಬಾರದು ಎಂದು ಪರಿಶಿಷ್ಟ ಜಾತಿಯ ರೈತರ ಒತ್ತಾಯವೂ ಇದೆ. ಆದರೆ ಕಾರ್ಖಾನೆ ಸ್ಥಾಪನೆಗೆ ಅನುಮತಿಗಾಗಿ ಆಡಳಿತಾತ್ಮಕ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿವೆ.