
ಬೆಂಗಳೂರು ಗ್ರಾಮಾಂತರ: ಮಳೆ ನೀರನ್ನು ಕೆರೆಗೆ ಸಾಗಿಸುತ್ತಿದ್ದ ಕಾಲುವೆ ಮುಚ್ಚಿ ರಸ್ತೆ ನಿರ್ಮಿಸಿದ್ದ ಪರಿಣಾಮ ಮಳೆಯಾದಾಗಲೆಲ್ಲ ಪ್ರವಾಹ ಭೀತಿ ಎದುರಿಸುವ ಪರಿಸ್ಥಿತಿ ಮಹದೇವಪುರ ಕ್ಷೇತ್ರದಲ್ಲಿ ಎದುರಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಅನುಕೂಲಕ್ಕಾಗಿ ನಿರ್ಮಿಸಿದ ರಸ್ತೆಈಗ ಅವರಿಗೇ ಮುಳುವಾಗಿದೆ.

j3tvkannada
ಬಳಗೆರೆ ಮುಖ್ಯ ರಸ್ತೆಯಿಂದ ಮಾರತ್ತಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಇಲ್ಲಿದ್ದ 450-600 ಅಡಿ ಉದ್ದದ ಕಾಲುವೆಯನ್ನೆ ರಸ್ತೆಯನ್ನಾಗಿ ಮಾಡಲಾಗಿದೆ. ಇಳಿಜಾರು ಪ್ರದೇಶದಲ್ಲಿದ್ದ ಕಾಲುವೆಯನ್ನು ರಸ್ತೆಯಾಗಿ ಮಾಡಿದ್ದರಿಂದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಬಳಗೆರೆಯಿಂದ ಮಾರತ್ತಹಳ್ಳಿ, ವೈಟ್ಫೀಲ್ಡ್ಗೆ ಹೋಗುವ ಹೆಚ್ಚಿನವರು ಕಾಲುವೆಯಿದ್ದ ಮಾರ್ಗವನ್ನೇ ಬಳಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು ಎರಡು ಲಕ್ಷ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುತ್ತಿವೆ.
ಬಳಗೆರೆಯಿಂದ ತೂಬರಹಳ್ಳಿ, ಕುಂದಲಹಳ್ಳಿ ಜಂಕ್ಷನ್ವರೆಗೆ ತಲುಪಲು ರಾಜ್ಯ ಸರಕಾರ, ಮೂವತ್ತು ವರ್ಷಗಳ ಹಿಂದೆಯೇ ಸಿ.ಡಿ.ಪಿ ರಸ್ತೆ ಗುರುತಿಸಿದೆ. ಆದರೆ, ಅದನ್ನು ಅಭಿವೃದ್ಧಿಪಡಿಸಿಲ್ಲ. ಕಳೆದ ಹತ್ತು ವರ್ಷಗಳಿಂದೀಚೆಗೆ ಬಳಗೆರೆ ಸುತ್ತಮುತ್ತ ಅನೇಕ ಅಪಾರ್ಟ್ಮೆಂಟ್ಗಳು ತಲೆಯೆತ್ತಿವೆ. ಇಲ್ಲಿ ಸಾವಿರಾರು ಜನ ವಾಸಿಸುತ್ತಿದ್ದಾರೆ. ಅವರಿಗೆಲ್ಲಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರತ್ತಹಳ್ಳಿ ಮುಖ್ಯ ರಸ್ತೆಗೆ ಸಮೀಪದಲ್ಲಿದ್ದ ಕಾಲುವೆಗೆ ಹಂತ- ಹಂತವಾಗಿ ಮಣ್ಣು ತುಂಬಿ, ಕಚ್ಚಾ ರಸ್ತೆಯನ್ನಾಗಿ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ಅದು ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು, ಈಗ ಬಿ.ಬಿ.ಎಂ.ಪಿ ಅಧಿಕಾರಿಗಳು ಅದನ್ನು ಪಕ್ಕಾ ರಸ್ತೆಯಾಗಿ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನ್ಯಾಯಾಲಯದ ಮೆಟ್ಟಿಲೇರಿದ್ದ ಗ್ರಾಮಸ್ಥರು:-
ಕಾಲುವೆಯನ್ನು ರಸ್ತೆಯಾಗಿ ಮಾಡಿರುವ ಬಗ್ಗೆ 2019ರಲ್ಲಿಯೇ ತೂಬರಹಳ್ಳಿ ಗ್ರಾಮಸ್ಥರಿಬ್ಬರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ನಗರಾಭಿವೃದ್ಧಿ ಇಲಾಖೆ ಮತ್ತು ಬಿ.ಬಿ.ಎಂ.ಪಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. 2020ರಲ್ಲಿ ವಿಚಾರಣೆಗೆ ಬಂದಿದ್ದ ಈ ಪ್ರಕರಣ, ಮುಂದೆ ಏನಾಯಿತು ಎಂಬುದರ ಬಗ್ಗೆ ಈವರೆಗೆ ಸ್ಪಷ್ಟವಾಗಿಲ್ಲ. ಆದ್ದರಿಂದ ನಾವು ಈ ವಿಚಾರವನ್ನು ಮತ್ತೊಮ್ಮೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದು ಸ್ಥಳೀಯರಾದ ವಕೀಲ ರವೀಶ್ ತಿಳಿಸಿದರು.
ಬಳಗೆರೆಯಿಂದ ಮಾರತ್ತಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ದೂಳುಮಯವಾಗಿದೆ. ಹೆಜ್ಜೆ ಇಟ್ಟಲ್ಲೆಲ್ಲಾ ದೊಡ್ಡ ಗುಂಡಿಗಳು ಬಾಯ್ತೆರೆದು ನಿಂತಿದ್ದು, ಜನರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ವಾಹನ ಸವಾರರು ಜೀವ ಭಯದಿಂದ ಏದುಸಿರು ಬಿಡುತ್ತಲೇ ಹೊಂಡ-ಗುಂಡಿಗಳಲ್ಲಿ ಸಾಗುವಂತಾಗಿದೆ. ಇದರಿಂದ ಅನೇಕರು ಬೆನ್ನು ನೋವಿನಿಂದ ಬಳಲುವಂತಾಗಿದೆ. ಕುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗಿಂತಲೂ ಇಲ್ಲಿನ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.
ಬಳಗೆರೆ ಮಾತ್ರವಲ್ಲದೆ, ಸುತ್ತಲಿನ ರಸ್ತೆಗಳಲ್ಲಿ ಮಳೆ ಸುರಿದಾಗ ನೀರು ಸರಾಗವಾಗಿ ಚರಂಡಿ ಸೇರಲು ವ್ಯವಸ್ಥೆ ಮಾಡಿಲ್ಲ. ಕೆಲವು ರಸ್ತೆಗಳಲ್ಲಿಒಂದು ಬದಿಯಲ್ಲಿ ಚರಂಡಿಗಳಿದ್ದರೂ ಹೂಳು ತುಂಬಿಕೊಂಡಿವೆ. ನೀರು ಮುಂದೆ ಸಾಗದೇ, ರಸ್ತೆಯೆಲ್ಲ ನದಿಯಾಗಿ ಪರಿವರ್ತನೆಯಾಗುತ್ತಿವೆ. ಇಂತಹ ರಸ್ತೆಯಲ್ಲಿ ವಾಹನ ಸವಾರರು ಸಿಲುಕಿ, ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಮೂರ್ನಾಲ್ಕು ವರ್ಷಗಳಿಂದಲೂ ತಗ್ಗು-ಗುಂಡಿಗಳಿಂದ ತುಂಬಿರುವ ಬಳಗೆರೆ ರಸ್ತೆ ಅಭಿವೃದ್ಧಿಪಡಿಸಿಲ್ಲ. ವರ್ತೂರು, ಬಳಗೆರೆ ರಸ್ತೆಗಳಲ್ಲಿ ಸಂಚರಿಸುವವರೆಲ್ಲ ದೂಳು ಸೇವಿಸುವಂತಾಗಿದೆ. ಬಿ.ಬಿ.ಎಂ.ಪಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ ಶ್ವೇತಾ, ಖಾಸಗಿ ಕಂಪನಿ ಉದ್ಯೋಗಿ.