
ಮೈಸೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಬಿ.ಜೆ.ಪಿ ತೀವ್ರವಾಗಿ ಖಂಡಿಸಿದ್ದು, ಆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಶಾಸಕ ಶ್ರೀವತ್ಸ, ಬಿ.ಜೆ.ಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಮಾಜಿ ಉಪಮೇಯರ್ ರೂಪ, ಸೇರಿದಂತೆ ಹಲವರು ಭಾಗಿಯಾಗಿದ್ದರು.

j3tvkannada
ಈ ಪ್ರತಿಭಟನೆಯನ್ನು ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರ ಬಿ.ಜೆ.ಪಿ ಘಟಕಗಳ ವತಿಯಿಂದ ಆಯೋಜಿಸಲಾಗಿತ್ತು. ಮೈಸೂರಿನ ಕೆ.ಆರ್ ಆಸ್ಪತ್ರೆ ಮುಂಭಾಗ ಸೇರಿದ ನಾಯಕರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಕಾರರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ನೀಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ಜನೌಷಧಿ ಕೇಂದ್ರಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಸಮರ್ಥನೆ ನೀಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾವು ಉಚಿತವಾಗಿ ನೀಡುತ್ತಿದ್ದೇವೆ ಹಾಗಾಗಿ, ಜನೌಷಧಿ ಕೇಂದ್ರಗಳಿಗೆ ಯಾಕೆ ಹೋಗಬೇಕು ಎಂದು ಸರ್ಕಾರ ಕೇಳುತ್ತಿದೆ. ವಿಧಾನ ಮಂಡಲ ಅಧಿವೇಶನದಲ್ಲಿಯೂ ಈ ಬಗ್ಗೆ ಸಮರ್ಪಕವಾದ ಉತ್ತರವನ್ನು ಸರ್ಕಾರ ನೀಡಿಲ್ಲ. ಮಾಧ್ಯಮದವರು ಈ ಕುರಿತಂತೆ ಕೇಳಿದರೆ ಆರೋಗ್ಯ ಸಚಿವರು ಉದ್ದಟತನದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಜನೌಷಧಿ ಕೇಂದ್ರ ಬೇಕೇ ಬೇಕು ಎಂದು ಆಗ್ರಹಿಸಿದರು.
ಜನೌಷಧಿ ಕೇಂದ್ರಗಳ ನಾಮಫಲಕಗಳ ಮೇಲೆ ಮೋದಿಯವರ ಭಾವಚಿತ್ರವಿರುವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ಜನೌಷಧಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ ಎಂದು ಆರೋಪಿಸಿದ ಅವರು, ಇಂದಿರಾ ಕ್ಯಾಂಟೀನ್ ನಲ್ಲಿ ಯಾರ ಫೋಟೋ ಹಾಕಿದ್ದೀರಾ. ಸರ್ಕಾರಿ ಬಸ್ ಮೇಲೆ ಯಾಕೆ ಫೋಟೋ ಹಾಕೊಂಡಿದ್ದೀರ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಬಿಡಬೇಕು. ಬಡವರ ಹೊಟ್ಟೆ ಮೇಲೆ ಒಡೆಯುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಬಿ.ಜೆ.ಪಿ ಅಧ್ಯಕ್ಷ ಎಲ್ ನಾಗೇಂದ್ರ, ರಾಜ್ಯ ಸರ್ಕಾರ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. 1200ಕ್ಕೂ ಹೆಚ್ಚು ಮೆಡಿಸಿನ್ ಗಳು ಇವೆ. ಇದರಲ್ಲಿ 800ಕ್ಕೂ ಹೆಚ್ಚು ಔಷಧಿಗಳು ಜನ ಔಷಧಿ ಕೇಂದ್ರಗಳಲ್ಲಿ ದೊರೆಯುತ್ತವೆ. ಜನೌಷಧಿ ಕೇಂದ್ರಗಳು ಇರುವುದು ಬಡವರಿಗಾಗಿ. ಹೀಗಾಗಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಜನೌಷಧಿ ಕೇಂದ್ರಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ನೀಡಲಾಗುತ್ತಿದೆ. ಅದರ ಆವರಣದಲ್ಲೇ ಬೇರೆ ಮಳಿಗೆಗಳಲ್ಲಿ ಔಷಧ ಮಾರಾಟದ ಅಗತ್ಯವಿಲ್ಲ. ಕೇವಲ 180 ಸರ್ಕಾರಿ ಆಸ್ಪತ್ರೆಗಳ ಕೇಂದ್ರಗಳನ್ನ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ, ಉಳಿದ 1220 ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.