
ಲಿಂಗಸುಗೂರು: ಕಳೆದ ಒಂದು ವಾರದಿಂದ ನಾರಾಯಣಪುರ ಜಲಾಶಯ ಪ್ರದೇಶದಲ್ಲಿ ಸುರಿದ ಮಳೆಯಿಂದ ಸುಮಾರು 3 ಟಿಎಂಸಿ ನೀರು ಹರಿದು ಬಂದಿದ್ದು, ಬಹುತೇಕ ತಳ ಕಂಡಿದ್ದ ಜಲಾಶಯಕ್ಕೆ ಇದೀಗ ಜೀವ ಕಳೆ ಬಂದಿದೆ. ಕಳೆದ ವಾರದಿಂದ ನಾರಾಯಣಪುರ ಜಲಾಶಯ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ 3 ಟಿಎಂಸಿ ನೀರು ಹರಿದು ಬಂದಿದೆ, ಇದು ರೈತರಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ನೀಡಿದೆ.

ಸಿಂಧನೂರಿನಲ್ಲಿ ಮುಂಗಾರು ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದು, ಗ್ರಾಮೀಣ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದೆ, ಅಲ್ಲದೆ ಅನಾರೋಗ್ಯದ ಭೀತಿ ಹೆಚ್ಚಾಗಿದೆ.ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಯ ಜೀವನಾಡಿ ನಾರಾಯಣಪುರ ಜಲಾಶಯದಿಂದ ನೀರು ಪಡೆಯಲು ಮಾರ್ಚ್ ಕೊನೆ ವಾರದಿಂದ ಏಪ್ರಿಲ್ ಮೊದಲ ವಾರದವರೆಗೆ ರೈತರು ಹೋರಾಟದ ಹಾದಿ ಹಿಡಿದಿದ್ದರು. ನಂತರ ಒಳ ಹರಿವಿಲ್ಲದೆ ಜಲಾಶಯದಲ್ಲಿ ನೀರಿನ ಅಭಾವ ಉಂಟಾಗಿತ್ತು.
ಈಗ ಪ್ರತಿನಿತ್ಯ 1700 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಕಳೆದ ವರ್ಷ ಇದೇ ಸಮಯದಲ್ಲಿ 15.620 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ ಜಲಾಶಯದಲ್ಲಿ 19.432 ಟಿಎಂಸಿ ನೀರು ಸಂಗ್ರಹವಿದೆ. ಕುಡಿಯುವ ನೀರಿನ ಉದ್ದೇಶದಿಂದ ಜಲಾಶಯದ ಎಡದಂಡೆ ನಾಲೆಗೆ ಮೇ 4 ರಿಂದ 20 ರವರೆಗೆ 2 ಟಿಎಂಸಿ ನೀರು ಹರಿಸಲಾಗಿದೆ. ಸದ್ಯ ಸಂಗ್ರಹವಾಗುತ್ತಿರುವ ನೀರಿನಿಂದ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳು ಕಡಿಮೆ.
ಬೇಸಿಗೆಯ ಬಿಸಿಲಿನ ಪ್ರಖರತೆಯ ಕಾರಣ ನಾರಾಯಣಪುರ ಜಲಾಶಯದ ಮುಂಭಾಗ ಸಂಪೂರ್ಣ ಬತ್ತಿ ಹೋಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅಲ್ಪ ಸ್ವಲ್ಪ ನೀರು ಹರಿಯುತ್ತಿರುವುದರಿಂದ ಜೀವಕಳೆ ಬಂದಂತಾಗಿದೆ.
ಕಳೆದ ಒಂದು ವಾರದಿಂದ ಜಲಾಶಯದ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯದಲ್ಲಿ 3 ಟಿಎಂಸಿ ನೀರು ಸಂಗ್ರಹವಾಗಿದೆ.
ಕುಡಿಯುವ ನೀರಿನ ಉದ್ದೇಶದಿಂದ ನಾರಾಯಣಪುರ ಎಡದಂಡೆ ನಾಲೆಗೆ ಮೇ 4 ರಿಂದ 20 ರವರೆಗೆ 2.40 ಟಿಎಂಸಿ ನೀರು ಹರಿಸಲಾಗಿದೆ ಎಂದಿದ್ದಾರೆ ವಿಜಯಕುಮಾರ ಅರಳಿ,ಎಂಜಿನಿಯರ್, ನಾರಾಯಣಪುರ ಜಲಾಶಯ ಸದಾ ಸುಡು ಬಿಸಿಲಲ್ಲೇ ಬದುಕುವ ಬಿಸಿಲ ನಾಡಿನ ಜನರಿಗೆ ಕಳೆದ ಒಂದು ವಾರದಿಂದ ಮೋಡ ಕವಿದ ಪರಿಸರ, ನಿರಂತರ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಅನುಭವಿಸುವ ಜತೆಯಲ್ಲಿ ದೈನಂದಿನ ಕೆಲಸ ಕಾರ್ಯಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ.

ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಮಳೆರಾಯ ಕೃಪೆ ತೋರಿದ್ದು, ಕೃಷಿ ಚಟುವಟಿಕೆಗೂ ಆಸರೆಯಾಗಿದೆ. ಈ ನಡುವೆ ವಿಪರೀತ ಮಳೆಯಿಂದಾಗಿ ಭೂಮಿ ಪೂರ್ಣ ಪ್ರಮಾಣದಲ್ಲಿ ಹದವಾಗಿದ್ದು, ಮಳೆ ನಿಂತ ಬಳಿಕವೇ ಕೃಷಿ ಕೆಲಸ ಶುರುವಾಗಲಿದೆ. ಬೆಂಬಿಡದೇ ಸುರಿಯುತ್ತಿರುವ ಮಳೆಯು ಜನಜೀವನ ಅಸ್ತವ್ಯಸ್ಥಗೊಳಿಸಿದ್ದು, ಮನೆಯಿಂದ ಹೊರ ಬಾರದ ಸ್ಥಿತಿ ಇದೆ. ತಾಲೂಕಿನಾದ್ಯಂತ ವಾರದಿಂದ ಮಳೆಯದ್ದೇ ಮಾತಾಗಿದ್ದು, ಯಾವಾಗ ನಿಲ್ಲುತ್ತೋ ಎಂಬ ಮಾತು ಜನರದ್ದಾಗಿದೆ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಳೆ ಸಾಮಾನ್ಯವಾಗಿದೆ. ಜೋಳದ ಬೆಳೆಗಾರರು ಬಿಟ್ಟರೆ ಉಳಿದ ಬಹುತೇಕರು ನಿಶ್ಚಿಂತರಾಗಿದ್ದಾರೆ. ಜೋಳ ಬೆಳೆದವರು ಮಾತ್ರ ಜೋಳ ಶೇಖರಿಸಿ ಇಟ್ಟುಕೊಂಡಿದ್ದು, ಅದನ್ನು ಸರಕಾರದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬೇಕಿದೆ. ಮಳೆಗೆ ಜೋಳ ಮೊಳಕೆಯೊಡೆಯುತ್ತಿದ್ದು, ಆತಂಕ ಮೂಡಿಸಿದೆ. ಮದುವೆ ಸೇರಿ ಶುಭ, ಸಮಾರಂಭಗಳಿಗೆ ಒಳ್ಳೆಯ ದಿನಗಳು ಇರುವುದರಿಂದ ಬೈಕ್ ಸವಾರರು ಸಮಸ್ಯೆಗೆ ಸಿಲುಕಿದ್ದಾರೆ.

ಮಳೆಯಲ್ಲಿಯೇ ನೆನೆದು ಕಾರ್ಯಕ್ರಮಗಳಿಗೆ ತೆರಳುವ ಸ್ಥಿತಿ ಇದೆ. ಕಾರ್ಯಕ್ರಮ ಆಯೋಜಕರು ಮಳೆರಾಯನ ಕಾಟಕ್ಕೆ ಸುಸ್ತಾಗಿದ್ದಾರೆ. ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಾಡಿಯಲ್ಲಿಯೇ ತಿರುಗುವಂತಾಗಿದೆ. ತಗ್ಗು ಗುಂಡಿಯಲ್ಲಿ ಬೈಕ್ ಸವಾರರು ಮಗುಚಿ ಬೀಳುತ್ತಿದ್ದಾರೆ. ಇತ್ತೀಚೆಗೆ ಸರಕಾರದ ಅನುದಾನದಲ್ಲಿ ಬೇಕಾಬಿಟ್ಟಿಯಾಗಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆರ್ಎಚ್ನಂ.1ಕ್ಯಾಂಪ್ ರಸ್ತೆ, ದೇವರಗುಡಿ ಸೇರಿದಂತೆ ಪ್ರಮುಖ ರಸ್ತೆಗಳು ಹದಗೆಟ್ಟು ಹೋಗಿವೆ.
ನಿರಂತರ ಮಳೆಯಿಂದಾಗಿ ವೃದ್ದರು, ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಿದೆ. ಚಳಿ,ಗಾಳಿಯಿಂದಾಗಿ ನೆಗಡಿ, ಕೆಮ್ಮು, ಜ್ವರಬಾಧೆ ಉಂಟಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಹೀಗಾಗಿ ಜನರು ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆಯಾಗಿದೆ. ಸಿಂಧನೂರಿನಲ್ಲಿ ಮಳೆಯಿಂದಾಗಿ ರಸ್ತೆ ಬದಿಯ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿರುವುದು ನೋಡುಗರ ಸಂತಸಕ್ಕೆ ಕಾರಣವಾಗಿದೆ. ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳು ಹೂವು ಬಿಡುತ್ತಿರುವುದರಿಂದ, ಬೆಳಗಾದರೆ ಎಲ್ಲ ಹೂಗಳು ರಸ್ತೆ ಮೇಲೆ ಬಿದ್ದು ಹರಡಿಕೊಂಡಿವೆ. ಮಳೆಗಾಲದಲ್ಲಿ ಪ್ರಕೃತಿ ಸೊಬಗು ಎಲ್ಲರ ಮನಸೆಳೆಯುತ್ತಿದೆ.