
ದಾವಣಗೆರೆ: ಜಿಲ್ಲೆಗೆ ಮುಂಗಾರು ಕಾಲಿಟ್ಟಿದ್ದು ಎರಡು ದಿನದಿಂದ ಮೋಡ ಕವಿದ ವಾತಾವರಣದ ಜತೆ ಇಡೀ ದಿನ ಅಗಾಧ ಮಳೆ ಸುರಿಯಿತು. ರಾತ್ರಿಯೂ ಮಳೆ ಸುರಿದು ಕೊಂಚ ಬಿಡುವು ನೀಡಿದೆ. ಮಲೆನಾಡಲ್ಲೂ ಮಳೆ ಅಬ್ಬರಿಸುತ್ತಿದ್ದು, ಜೀವನಾಡಿ ಭದ್ರಾ ಡ್ಯಾಂಗೆ ಒಳ ಹರಿವು ಶುರುವಾದರೆ, ತುಂಗಾ ಡ್ಯಾಂ ತುಂಬಿ ನದಿಗೆ ನೀರು ಬಿಡಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

j3tvkannada
ಜಿಲ್ಲೆಯಲ್ಲಿ ಮುಂಗಾರು ಪೂರ್ವ, ವಾಡಿಕೆಗಿಂತ ಶೇ.136ರಷ್ಟು ಹೆಚ್ಚು ಮಳೆ ಸುರಿದಿದೆ. ಮಾರ್ಚ್ 1ರಿಂದ ಮೇ 24ರ ವರೆಗೂ 62.4 ಮಿ.ಮೀ ವಾಡಿಕೆಗೆ 147.5 ಮಿ.ಮೀ ಮಳೆಯಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ಇದೇ ಹೊತ್ತಿನಲ್ಲಿ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಭಾನುವಾರದಿಂದ ಮುಂಗಾರು ಆರಂಭವಾಗಿದೆ. ಜಿಲ್ಲೆಯಲ್ಲೂ 2.6 ಮಿ.ಮೀ ವಾಡಿಕೆಗೆ 3.6 ಮಿ.ಮೀ ಮಳೆ ಸುರಿದಿದೆ. ಮಲೆನಾಡು ಸೆರಗಿಗೆ ಅಂಟಿಕೊಂಡಿರುವ ಹೊನ್ನಾಳಿಯಲ್ಲಿ ಅತಿ ಹೆಚ್ಚು 7.2 ಮಿ.ಮೀ ಮಳೆ ಸುರಿದು ಮುಂಗಾರು ಭರವಸೆ ಹುಟ್ಟಿಸಿದೆ.
ಜೂನ್ನಿಂದ ಬಿತ್ತನೆ ಶುರು:-
ಉಳಿದಂತೆ ನ್ಯಾಮತಿ 4.9, ಚನ್ನಗಿರಿ 4.1, ಹರಿಹರ 4.6, ದಾವಣಗೆರೆ 2.6 ಮಿ.ಮೀ, ಜಗಳೂರು ತಾಲೂಕಲ್ಲಿ ಒಂದು ಮಿ.ಮೀ ಮಳೆ ಸುರಿದಿದೆ. ಒಂದು ಮನೆಗೆ ಹಾನಿಯಾಗಿದೆ, ಹರಿಹರ ತಾಲೂಕಲ್ಲಿ 26 ಎಕರೆ ಭತ್ತದ ಬೆಳೆಗೆ ಹಾನಿಯಾಗಿ 1.81ಲಕ್ಷ ರೂ. ಅಂದಾಜಿಸಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಜೂನ್ ಮೊದಲ ವಾರದಲ್ಲಿ ಆರಂಭ ಆಗುವುದರಿಂದ ಈಗ ಮಳೆ ಬಂದಿರುವುದು ರೈತರಿಗೆ ಅನುಕೂಲ ಆಗಿದೆ. ಮುಂದಾವರ್ತಿ ಬಿತ್ತನೆಗೆ ಅನುಕೂಲವಾಗಿ, ಹಿಂಗಾರು ಬಿತ್ತನೆಯೂ ಸಕಾಲಕ್ಕೆ ಆಗಲಿದೆ.
ಭದ್ರಾ ಡ್ಯಾಂ ಜಿಲ್ಲೆಯ ಆರ್ಥಿಕತೆಯ ತಳಪಾಯ, ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶ ಇರುವುದು ಇಲ್ಲಿಯೇ. ಜತೆಗೆ ಕುಡಿಯುವ ನೀರಿಗೂ ಡ್ಯಾಂ ಆಸರೆಯಾಗಿದೆ. ಹಾಗಾಗಿ ಮುಂಗಾರು ಶುರುವಾಯಿತೆಂದರೆ ದಾವಣಗೆರೆ ಸೇರಿ ಬಯಲು ಸೀಮೆಯ ಜನ ಮಲೆನಾಡಿನ ಭದ್ರಾ, ತುಂಗಾ ಜಲಾನಯನ ಪ್ರದೇಶದಲ್ಲಿ ಬೀಳುವ ಹನಿ ನೀರಿನ ಲೆಕ್ಕ ಇಡುತ್ತಾರೆ. ಈ ಡ್ಯಾಂಗಳು ತುಂಬಿದರೆ ಎಲ್ಲರಿಗಿಂತ ಹೆಚ್ಚು ಹರ್ಷ ಪಡುತ್ತಾರೆ.
ಈಗ ತುಂಗಾ ಡ್ಯಾಂ ತುಂಬಿರುವುದರಿಂದ ಜಿಲ್ಲೆಯ ನ್ಯಾಮತಿ ತಾಲೂಕಿನ ತುಂಗಾ ಅಚ್ಚುಕಟ್ಟು ಪ್ರದೇಶದ ರೈತರು ಖುಷಿಯಾಗಿದ್ದಾರೆ. ಇನ್ನೊಂದೆಡೆ ನದಿಗೆ ನೀರು ಹರಿದಿದ್ದು ನದಿ ಪಾತ್ರದ ನಗರ, ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಲಿದೆ. ನದಿ ನೀರಿನ ಹರಿವು ಕಡಿಮೆಯಾಗಿ ಜೂನ್, ಜುಲೈ ತಿಂಗಳಲ್ಲಿ ದಾವಣಗೆರೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು, ಆದರೆ ಈ ವರ್ಷ ಆ ಸಮಸ್ಯೆ ಇರುವುದಿಲ್ಲ.
ಒಳಹರಿವು ಆರಂಭ:-
ಇನ್ನು ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ಜಲಾನಯನ ಪ್ರದೇಶದಲ್ಲೂ ಮಳೆ ಆಗುತ್ತಿದ್ದು, ಡ್ಯಾಂಗೆ ಸೋಮವಾರ 2860 ಕ್ಯೂಸೆಕ್ ಒಳಹರಿವಿದೆ. ಇದು ಈ ವರ್ಷದ ಮೊದಲ ಒಳಹರಿವು. ಸಾಮಾನ್ಯವಾಗಿ ಜೂನ್ ಎರಡನೇ ವಾರದಲ್ಲಿ ಶುರುವಾಗುತ್ತಿದ್ದ ಒಳ ಹರಿವು, ಈ ಬಾರಿ ಮೇ ಕೊನೆಯ ವಾರದಲ್ಲಿಯೇ ಆರಂಭವಾಗಿ ರೈತರ ಹರ್ಷಕ್ಕೆ ಕಾರಣವಾಗಿದೆ.
16 ಸಾವಿರ ಕ್ಯೂಸೆಕ್ ನದಿಗೆ:-
ತುಂಗಾ ಡ್ಯಾಂ ತುಂಬಿದ್ದು, ಸೋಮವಾರ 16 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಮುಂಗಾರು ಆರಂಭದ ದಿನವೇ ಡ್ಯಾಂ ತುಂಬಿದ್ದ ಇದೇ ರೀತಿ ಉತ್ತಮ ಮುಂಗಾರು ನಡೆದರೆ, ನಾಲ್ಕೈದು ತಿಂಗಳು ಈ ಡ್ಯಾಂನಿಂದ ನದಿಗೆ ನೀರು ಹರಿಯಲಿದೆ, ಭದ್ರಾ ಡ್ಯಾಂ ಕೂಡ ತುಂಬಿದರೆ ಜಿಲ್ಲೆಯಲ್ಲಿ ನದಿ ಉಕ್ಕಿ ಹರಿದು ಪ್ರವಾಹವಾಗುವ ಸಾಧ್ಯತೆಯಿದೆ.